ಕನ್ನಡಪ್ರಭ ವಾರ್ತೆ ಸಕಲೇಶಪುರ
ಕೇಂದ್ರದಲ್ಲಿ ರಾಜಕೀಯ ಬದಲಾವಣೆಯಾಗಲೇಬೇಕು ಎಂದು ಒತ್ತಾಯಿಸಿ ಶುಕ್ರವಾರ ಪಟ್ಟಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಪರಿವರ್ತನೆಗಾಗಿ ಪಾದಯಾತ್ರೆ ನಡೆಸಿದರು.ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಮುಖ್ಯಬೀದಿಯಲ್ಲಿ ಪಾದಯಾತ್ರೆ ನಡೆಸಿದ ಪಕ್ಷದ ಕಾರ್ಯಕರ್ತರು. ಪಟ್ಟಣದ ಹಳೇಬಸ್ನಲ್ಲಿ ಸಭೆ ನಡೆಸಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಎಂ.ಸಿ ಡೋಂಗ್ರೆ ಕೇಂದ್ರದ ಒಂದು ದಶಕದ ಸಾಧನೆ ಶೂನ್ಯವಾಗಿದ್ದು ಎನ್ಡಿಎ ಸರ್ಕಾರ ಬಂದ ನಂತರ ಎಲ್ಲಾ ಬೆಲೆಗಳು ಗಗನಮುಖಿಯಾಗಿದ್ದು ಬಡವರು ಬದುಕುವುದೇ ಕಷ್ಟಕರವಾಗಿದೆ. ಪೆಟ್ರೋಲ್ ನೀತಿ ತೀರ ಬೇಸರ ತರುವಂತಿದ್ದು ಕಚ್ಚಾತೈಲ ಬೆಲೆ ಕುಸಿತಗೊಂಡರು ಪೆಟ್ರೋಲ್ ಬೆಲೆ ಇಳಿಯದಿರುವುದರ ಹಿಂದೆ ಉದ್ಯಮಿಗಳ ಕೈವಾಡವಿದೆ. ನಿರುದ್ಯೋಗ ನಿಯಂತ್ರಕ್ಕೆ ಕಡಿವಾಣವೆ ಇಲ್ಲದಿರುವುದು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ನೀತಿಯಿಂದ ದೇಶದ ಮಾನ ಹರಾಜಾಗುತ್ತಿದೆ. ಇದಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಕಾರ್ಮಿಕರ ಪರವಾಗಿ ಯಾವುದೆ ನೀತಿಯನ್ನು ಜಾರಿಗೊಳಿಸಲು ವಿಫಲವಾಗಿದೆ. ಹಿಂದೆ ರಾಜದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂಸುಧಾರಣಾ ನೀತಿಯನ್ನು ರದ್ದುಪಡಿಸುವ ಭರವಸೆ ನೀಡಿ ಸುಮ್ಮನಾಗಿದೆ. ಕೆಪಿಎಸ್ಸಿ ಕರ್ಮಕಾಂಡದ ನಿಷ್ಪಕ್ಷಪಾತ ತನಿಖೆಯಾಗಬೇಕು. ವಲಸಿಗರ ಮಕ್ಕಳಿಗೆ ವಿದ್ಯಾಭ್ಯಾಸ ಜಾರಿಗೊಳಿಸಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟು ಅಗಸ್ಟ್ ೬ರಿಂದ ೧೪ರವರೆಗೆ ದೇಶಾದ್ಯಂತ ಪರಿವರ್ತನಾ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಪಾದಯಾತ್ರೆಯಲ್ಲಿ ತಾಲೂಕು ಕಾರ್ಯದರ್ಶಿ ಹರೀಶ್, ಸುವರ್ಣ,ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.