ಕುಕನೂರು:ಹಿರಿಯರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಗ್ಯಾರಂಟಿ ಸಮಿತಿ ಸದಸ್ಯ ಸಿರಾಜ್ ಕೊಪ್ಪಳ ಸಭೆಗೆ ತಿಳಿಸಿದರು.
ಕುಕನೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಸಹ ಆಹಾರ ಇಲಾಖೆ ಸುವೀಧಾ ಯೋಜನೆಯಡಿಯಲ್ಲಿ ಆಹಾರ ಧಾನ್ಯ ಸರಿಯಾಗಿ ತಲುಪಿಸಬೇಕು. ಯೋಜನೆಗೆ ಫಲಾನುಭವಿಗಳ ನೋಂದಣಿ ಮಾಡಬೇಕು ಎಂದು ಹೇಳಿದರು.
ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳಾದ ಮಲ್ಲಯ್ಯ ಹಾಗೂ ಮಂಜುನಾಥ ಮ್ಯಾಗಳಮನಿ, ಈ ಸುವೀಧಾ ಯೋಜನೆಯಲ್ಲಿ ನೋಂದಣಿ ಕಾರ್ಯ ಜರುಗುತ್ತಿದೆ ಎಂದು ಹೇಳಿದರು. ಕುಕನೂರು ತಾಲೂಕಿನಲ್ಲಿ 347 ಜನರಲ್ಲಿ 10 ಜನರಿಗೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 412 ಜನರಲ್ಲಿ 177 ಜನರಿಗೆ ಸುವೀಧಾ ಯೋಜನೆಯಲ್ಲಿ ಆಹಾರ ಧಾನ್ಯ ತಲುಪುತ್ತಿವೆ ಎಂದು ಹೇಳಿದರು.ಯಲಬುರ್ಗಾ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಲ್ಲಿ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ನೂರಕ್ಕೆ ನೂರು ಪ್ರತಿಶತ ಯೋಜನೆ ಫಲ ಆಗಬೇಕು ಎಂದು ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪಗೆ ಸೂಚಿಸಿದರು.
ನಂತರ ಡಿಪೋ ಮ್ಯಾನೇಚರ್ ವೆಂಟಕಚಲಾಪತಿ ಅವರಿಗೆ ಶಾಸಕ ಬಸವರಾಜ ರಾಯರಡ್ಡಿ ತಾಲೂಕಿಗೆ ಹೊಸ ಬಸ್ ನೀಡುವ ಭರವಸೆ ನೀಡಿದ್ದಾರೆ. ಈ ಹಿಂದೆ ನೀಡಿದ ಬಸ್ ಗಂಗಾವತಿಗೆ ಕಳುಹಿಸಿದ್ದರು. ದಯವಿಟ್ಟು ಆ ಕಾರ್ಯ ಈ ಸಲ ಮಾಡಬೇಡಿ ಎಂದು ಹೇಳಿದರು.ಈ ವೇಳೆ ಮಾತನಾಡಿದ ಕುಕನೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಕುಕನೂರು ಬಸ್ ನಿಲ್ದಾಣಕ್ಕೆ ಶುದ್ಧ ಕುಡಿವ ನೀರಿನ ಘಟಕ ಮಂಜೂರಾಗಿದೆ. ಅಲ್ಲದೆ ಶೀಘ್ರ ಬಸ್ ಬುಕ್ಕಿಂಗ್ ಸೆಂಟರ್ ಸಹ ಆರಂಭವಾಗಲಿದೆ ಎಂದು ತಿಳಿಸಿದರು.
ಕೆಇಇ ಅಧಿಕಾರಿ ಮಾತನಾಡಿ, ಜನರು ಸ್ಮಾರ್ಟ ಮೀಟರ್ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಉದ್ಯೋಗಾಧಿಕಾರಿ ದುರ್ಗಾ ಮಾತನಾಡಿ, ಯುವವನಿಧಿ ಪಡೆಯುತ್ತಿರುವವರಿಗೆ ಯುವನಿಧಿ ಪ್ಲಸ್ ಯೋಜನೆಯಲ್ಲಿ ತರಬೇತಿ ನೀಡಿ ಉದ್ಯೋಗ ನೀಡಲಾಗುತ್ತಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅಧಿಕಾರಿಗಳು ಗ್ಯಾರಂಟಿ ಯೋಜನೆಯ ಪ್ರಗತಿ ವರದಿ ಹೇಳಿದರು.ತಾಪಂ ಇಒ ಸಂತೋಷ ಬಿರಾದಾರ ಪಾಟೀಲ ಮಾತನಾಡಿ, ಫೆ.17ಕ್ಕೆ ಕೊಪ್ಪಳದಲ್ಲಿ ಗ್ಯಾರಂಟಿ ಉತ್ಸವ ಜರುಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉತ್ಸವಕ್ಕೆ ಎಲ್ಲರೂ ಹಾಜರಾಗೋಣ ಎಂದು ಹೇಳಿದರು.
ಯಲಬುರ್ಗಾ ತಾಪಂ ಇಒ ನೀಲಂ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್ಲ, ಜಿಲ್ಲಾ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ, ಹಾಗೂ ತಾಲೂಕು ಸದಸ್ಯರಿದ್ದರು.