ಕನ್ನಡಪ್ರಭ ವಾರ್ತೆ ಕಾರ್ಕಳ
ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನದ ಭಕ್ತಿ ಕಾರ್ಯಗಳು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಈ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥಿಸೋಣ’ ಎಂಬ ಹಬ್ಬದ ದಿನದ ವಿಷಯವನ್ನು ಧ್ಯಾನಿಸಲಾಯಿತು.ದೈನಂದಿನ ಜೀವನದಲ್ಲಿ ನಾವೆಲ್ಲರು ವಿವಿಧ ಪ್ರಲೋಭನೆಗಳನ್ನು ಎದುರಿಸಿ ಹಿಮ್ಮೆಟ್ಟಿ ನಿಂತು ಅವೆಲ್ಲವನ್ನು ಗೆಲ್ಲಬೇಕು. ಪ್ರಭು ಕ್ರಿಸ್ತರು ಸೈತಾನನ ಪ್ರಲೋಭನೆಯನ್ನು ಮೆಟ್ಟಿ ನಿಂತರು. ಆದರೆ ಆದಾಮ್ ಹಾಗೂ ಹಾವ್ವ ವಿಷಸರ್ಪದ ಪ್ರಲೋಭನೆಗೆ ಒಳಗಾದರು. ಹೀಗಾಗಿ ಪ್ರಲೋಭನೆ ನಮ್ಮನ್ನು ಸದಾಕಾಲಾ ಕಾಡುತ್ತಿರುವಾಗ ಯೇಸುವಿನಂತೆ ನಾವೆಲ್ಲರು ಅದನ್ನು ಎದುರಿಸಿ ಜಯಶೀಲರಾಗಬೇಕು. ಭಕ್ತಜನತೆ ಬಸಿಲಿಕದ ಸುತ್ತಮುತ್ತ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಒಂದಾದರು.
ಜ.೨೩ರಂದು ಬೆಳಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟದ ದಿವ್ಯ ಪ್ರಸನ್ನತೆಯನ್ನು ಕಾಣಲು ಭಕ್ತಜನರು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿದರು. ಅಂತೆಯೇ ಹಲವಾರು ರೋಗಿಗಳು, ಅಸ್ವಸ್ಥರು ವಿಶೇಷ ಪ್ರಾರ್ಥನೆಗಳಿಗಾಗಿ, ಆಶೀರ್ವಾದಕ್ಕಾಗಿ ಪಾಲ್ಗೊಂಡರು.ವಾರ್ಷಿಕ ಮಹೋತ್ಸವದ ಪ್ರಮುಖ ಗಾಯನ ಬಲಿಪೂಜೆಯನ್ನು ಪುತ್ತೂರಿನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗಿಸ್ ಮಾರ್ ಮಕಾರಿಯೋಸ್ ನೆರವೇರಿಸಿ ಪ್ರಲೋಭನೆಗೆ ಒಳಗಾಗದೆ ಅಚಲವಾಗಿ ಸರ್ವವನ್ನು ಎದುರಿಸಬೇಕು ಎಂದು ಪ್ರಬೋಧನೆಯನ್ನು ನೀಡಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜೋಕಿಂ ಡಿಸೋಜ, ಕಾಪುಚಿನ್, ಉಡುಪಿ, ವಂದನೀಯ ಆಲ್ವಿನ್ ಸಿಕ್ವೇರಾ, ಕಾರ್ಮೆಲ್ ಸಭೆ, ವಂದನೀಯ ಲೂಯಿಸ್ ಡೇಸಾ, ನಕ್ರೆ, ವಂದನೀಯ ವಿನ್ಸೆಂಟ್ ಕುವೆಲ್ಲೊ, ಬೈಂದುರ್, ವಂದನೀಯ ಲಿಯೋ ಪ್ರವೀಣ್ ಡಿಸೋಜ, ಉದ್ಯಾವರ್, ಅನಿಲ್ ಡಿಸೋಜ, ಪೆರಂಪಳ್ಳಿ, ಪರಮಪೂಜ್ಯ ಡಾ. ಜೀವರ್ಗಿಸ್ ಮಾರ್ ಮಕಾರಿಯೋಸ್ ಪುತ್ತೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ವಂದನೀಯ ವಾಲ್ಟರ್ ಡಿಮೆಲ್ಲೊ ಬೆಳ್ತಂಗಡಿ, ವಂದನೀಯ ಒನಿಲ್ ಡಿಸೋಜ, ಮೂಡುಬಿದಿರೆ, ವಂದನೀಯ ಹೆರಾಲ್ಡ್ ಪಿರೇರಾ, ಕಣಜಾರ್ ಇವರುಗಳು ಅರ್ಪಿಸಿದರು.ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿದರು, ಪವಿತ್ರ ಪುಪ್ಕರಣಿಯ ಸನ್ನಿಧಿಯಲ್ಲಿ ತೀರ್ಥವನ್ನು ಪಡೆದು, ದೀರ್ಘ ಜಪತಪ ವಿಶೇಷ ಪ್ರಾರ್ಥನೆ ಹಾಗೂ ಬಸಿಲಿಕದ ಮಹಾನ್ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ ೧೦ ಗಂಟೆಗೆ ನೆರವೇರಿಸಿ ಮಹೋತ್ಸವದ ತೃತೀಯ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಭಕ್ತಿ-ಆಚರಣೆಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು.