ಧಾರವಾಡ: ವೈದ್ಯ ದಂಪತಿಯ ಕೌಟುಂಬಿಕ ಕಲಹ ಗಂಡನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಧಾರವಾಡಲ್ಲಿ ಬುಧವಾರ ನಡೆದಿದೆ. ಸ್ವತಃ ಪತ್ನಿಯೇ ಗಂಡನಿಗೆ ಅನಸ್ತೇಶಿಯಾ ನೀಡಿ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದು ಶವದ ಮುಂದೆ ರೀಲ್ಸ್ ನೋಡುತ್ತಿದ್ದಳು. 

 ಅಲ್ಲದೇ, ಕೊಲೆ ವಿಷಯ ಪೊಲೀಸರಿಗೆ ಹೇಳುತ್ತಾನೆಂದು ಹೆತ್ತ ಮಗುವಿಗೂ 3 ಬಾರಿ ಇರಿದ್ದಾಳೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿದ್ದ ಡಾ.ಕಿರಣ ಹೊನ್ನಣ್ಣವರ (45) ಮೃತ ದುರ್ದೈವಿ. ನೇತ್ರತಜ್ಞೆ ಡಾ.ಪ್ರಿಯಾಂಕಾ (40) ಕೊಲೆ ಆರೋಪಿ.

ಮಗುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ

ಘಟನೆಯಲ್ಲಿ ಗಾಯಗೊಂಡಿರುವ ನಿಯತ್‌ (8) ಎಂಬ ಮಗುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊದಲ ಪತ್ನಿಗೆ ಮಕ್ಕಳು ಆಗದ್ದಕ್ಕೆ ವಿಚ್ಛೇದನ ನೀಡಿದ್ದ ಡಾ.ಕಿರಣ 2017ರಲ್ಲಿ ಮ್ಯಾಟ್ರಿಮೊನಿ ಮೂಲಕ ಪರಿಚಯವಾದ ಡಾ.ಪ್ರಿಯಾಂಕಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು ಎಂದು ಗೊತ್ತಾಗಿದೆ.


 ದಿನ ಕಳೆದಂತೆ ಇಬ್ಬರಲ್ಲಿ ಮನಸ್ತಾಪ ಶುರುವಾಗಿ ಆಗಾಗ ಜಗಳ ನಡೆಯುತ್ತಿತ್ತು. ಈ ನಡುವೆ ಡಾ.ಕಿರಣ ಮಂಗಳವಾರ ರಾತ್ರಿ ಕರ್ತವ್ಯ ನಿರ್ವಹಿಸಿ ಬುಧವಾರ ಬೆಳಗ್ಗೆ 11 ಗಂಟೆಗೆ ಮನೆಗೆ ಆಗಮಿಸಿ ಕೊಠಡಿಯಲ್ಲಿ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ಡಾ.ಪ್ರಿಯಾಂಕಾ, ಪತಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕುತ್ತಿಗೆಗೆ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾಳೆ ಎಂಬುದು ತಿಳಿದಿದೆ. ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ನಿರಾತಂಕವಾಗಿ ಸೋಪಾದಲ್ಲಿ ಕುಳಿತುಕೊಂಡಿದ್ದಳು. ಸಂಜೆ 4 ಗಂಟೆಗೆ ಮಗ ನಿಹಿತ್‌ ಶಾಲೆಯಿಂದ ಮರಳಿ ಬಂದಾಗ ತಂದೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾನೆ. ಆಗ ಪಾಪಿ ತಾಯಿ, ಹೆತ್ತ ಮಗನ ಮೇಲೂ 3 ಬಾರಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾಳೆ.

ಅತ್ತೆ-ಮಾವನನ್ನೇ ಹೊರಹಾಕಿದ್ದಳು:

ಇತ್ತೀಚಿಗೆ ಕಿರಣ್ ತಂದೆ-ತಾಯಿಗೆ ಮಂಡಿ ನೋವಿನ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಮಗನ ಮನೆಯಲ್ಲಿ 3 ತಿಂಗಳಿಂದ ತಂಗಿದ್ದರು. ಇದನ್ನು ಸಹಿಸದ ಪ್ರಿಯಾಂಕ ಶನಿವಾರವಷ್ಟೇ ವೃದ್ಧ ಅತ್ತೆ-ಮಾವನನ್ನು ಮನೆಯಿಂದ ಹೊರಹಾಕಿದ್ದಳು. ಅದಾಗಿ ನಾಲ್ಕೇ ದಿನದಲ್ಲಿ ಕಿರಣ ಹತ್ಯೆಯಾಗಿದೆ ಎಂದು ಕುಟುಂಬಸ್ಥರು ಅಳಲು ತೊಡಿಕೊಂಡಿದ್ದಾರೆ.

ಪಾಪ ಪ್ರಜ್ಞೆಯೇ ಇಲ್ಲ:

ಪತಿ ರಕ್ತದ ಮಡುವಿನಲ್ಲಿ, ಪುತ್ರ ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಪ್ರಿಯಾಮ ಮೊಬೈಲ್‌ನಲ್ಲಿ ರೀಲ್ಸ್‌ ನೋಡುತ್ತ ಕುಳಿತಿದ್ದಳು. ಅಲ್ಲಿಗೆ ಆಗಮಿಸಿದ ಪೊಲೀಸರು ವಿಚಾರಿಸಿದಾಗ ನನಿಗೇನು ಗೊತ್ತಿಲ್ಲ. ನನ್ನನ್ನು ಏನು ಕೇಳಿಬೇಡಿ ಎಂದು ಸಾಮಾನ್ಯರಂತೆ ಮನೆಯಿಂದ ಪೊಲೀಸರೊಂದಿಗೆ ಹೋಗಿದ್ದಾಳೆಂದು ತಿಳಿದು ಬಂದಿದೆ.

ಮಗು ರಕ್ಷಿಸಿದ ಪೊಲೀಸರು

ಡಬಲ್‌ ಮರ್ಡರ್‌ ಆಗಿದೆ ಎಂಬ ಮಾಹಿತಿ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಡಾ.ಕಿರಣ ಮೃತಪಟ್ಟಿದ್ದು, ಅವರ ಮಗ ಚಾಕು ಇರಿತದಿಂದ ನಿಂತ್ರಾಣಗೊಂಡಿದ್ದ. ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

- ಧಾರವಾಡದಲ್ಲಿ ಭೀಕರ ಘಟನೆ । ಪತಿ ಹತ್ಯೆ ಬಳಿಕ ಪುತ್ರನ ಕೊಲೆತ್ನ

- ಮ್ಯಾಟ್ರಿಮೊನಿ ಮೂಲಕ 2017ರಲ್ಲಿ ಮದುವೆಯಾಗಿದ್ದ ವೈದ್ಯ ದಂಪತಿ

- ಡಾ.ಕಿರಣಗೆ ಅನಸ್ತೇಶಿಯಾ ನೀಡಿ ಹತ್ತಕ್ಕೂ ಹೆಚ್ಚು ಬಾರಿ ಚಾಕು ಇರಿತ

- ಪತಿ ಹತ್ಯೆ ಪೊಲೀಸರಿಗೆ ಹೇಳುತ್ತಾನೆಂದು ಮಗುವಿಗೂ 3 ಬಾರಿ ಇರಿತ