ಮಂಗಳೂರು: ಆರೋಗ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಹಗಲು ರಾತ್ರಿ ಲೆಕ್ಕಿಸದೆ ನಿಸ್ವಾರ್ಥ ಸೇವಾ ಮನೋಭಾವ, ಪ್ರಾಮಾಣಿಕತೆ ಮತ್ತು ನಿರಂತರ ಶ್ರಮಿಸುವ ವೈದ್ಯರ ವೃತ್ತಿ ಮತ್ತು ತ್ಯಾಗಮಯ ಜೀವನ ಪ್ರಶಂಸನೀಯ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.ಅವರು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಡಾ.ಎ.ವಿ.ರಾವ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕೋವಿಡ್ ಸಾಂಕ್ರಾಮಿಕ ರೋಗದ ಗಂಭೀರ ಸಂಕಷ್ಟದಲ್ಲಿ ವೈದ್ಯರು ಸಲ್ಲಿಸಿದ ತ್ಯಾಗಮಯ ಸೇವೆ ಅಮೂಲ್ಯ. ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿ, ಶುಭಹಾರೈಸಿದರು.ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶಾಂತಾರಾಮ ಶೆಟ್ಟಿ ಮಾತನಾಡಿ, ವೈದ್ಯಕೀಯ ವೃತ್ತಿ ಒಂದು ಶ್ರೇಷ್ಠ-

ಗೌರವಾನ್ವಿತ, ಮಾನವೀಯ ಮೌಲ್ಯಗಳನ್ನು ಒಳಗೊಂಡ ವೃತ್ತಿಯಾಗಿದ್ದು, ವೈದ್ಯರು ಸಮಾಜದಲ್ಲಿ ಉನ್ನತ ಸ್ಥಾನ

ಮಾನವನ್ನು ಪಡೆದಿದ್ದಾರೆ. ರೋಗಿಗಳು ವೈದ್ಯರನ್ನು ದೇವರಿಗೆ ಸಮಾನ ಎಂದು ಗುರುತಿಸಿದ್ದಾರೆ. ಇದು ಭಗವಂತನ

ಕೃಪೆ. ಹಿರಿಯ ವೈದ್ಯರು ಯುವ ವೈದ್ಯರಿಗೆ ತಮ್ಮ ಅನುಭವ, ಜ್ಞಾನ, ಕೌಶಲ್ಯಗಳನ್ನು ಧಾರೆ ಎರೆದು ಪ್ರೋತ್ಸಾಹಿಸಬೇಕು ಎಂದರು.


ಮಾಜಿ ಅಧ್ಯಕ್ಷ ಡಾ.ಕೆ.ಆರ್.ಕಾಮತ್‌ ಪಶ್ಚಿಮ ಬಂಗಾಲ ಕೊಲ್ಕತ್ತಾ ನಗರದ ಖ್ಯಾತ ವೈದ್ಯ, ಮಾಜಿ ಮುಖ್ಯಮಂತ್ರಿ ಭಾರತರತ್ನ ಪ್ರಶಸ್ತಿ ಪುರಸ್ಕೃತ ದಿ.ಬಿ.ಸಿ.ರಾಯ್‌ರವರ ಜೀವಮಾನ ಸಾಧನೆಯ ಮಾಹಿತಿ ನೀಡಿದರು.

ನಗರದ ಖ್ಯಾತ ವೈದ್ಯರಾದ ಡಾ.ಸುರೇಶ್ ವೈ.ವಿ. (ಅರಿವಳಿಕೆ ಶಾಸ್ತ್ರ ತಜ್ಞರು), ಡಾ.ಕೆ.ಪಿ.ಶೆಣೈ (ಕುಟುಂಬ ವೈದ್ಯರು), ಡಾ. ಮೀರಾ ರಾವ್ ಎ. (ಮಕ್ಕಳ ಶಾಸ್ತ್ರ ತಜ್ಞರು) ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸುಧೀರ್ಘ ಸೇವೆ, ಕೊಡುಗೆ, ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆ ಪ್ರಾಯೋಜಿಸಿದ ವೈದ್ಯರ ದಿನಾಚರಣೆಯ ಪ್ರಶಸ್ತಿ ಪುರಸ್ಕೃತರಾದ ಡಾ.ಸಚ್ಚಿದಾನಂದ ರೈರನ್ನು ಸನ್ಮಾನಿಸಲಾಯಿತು.

ವೆನ್ಲಾಕ್‌ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಪ್ರಕಾಶ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್, ಮಾಜಿ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಭಾರತೀಯ ವೈದ್ಯಕೀಯ ಸಂಘ ಪ್ರತಿಷ್ಠಾನದ ಅಧ್ಯಕ್ಷ ಡಾ. ದಿವಾಕರ ರಾವ್, ಮಹಿಳಾ ವೈದ್ಯರ ಸಂಘದ ಅಧ್ಯಕ್ಷೆ ಡಾ.ಪ್ರೇಮಾ ಕುಟಿನ್ಹಾ ಮತ್ತಿತರರು ಇದ್ದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಸ್ವಾಗತಿಸಿದರು. ಅಕ್ಷತಾ ನಿರೂಪಿಸಿದರು. ಕಾರ್ಯದರ್ಶಿ ಡಾ.ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಮಹಿಳಾ ವೈದ್ಯ ವೃಂದದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.