ಕಾಡಿನಿಂದ ಹೊರಬಂದು ದಾರಿತಪ್ಪಿ ಹೆದ್ದಾರಿ ಮೂಲಕ ಸಾಗುತ್ತಿದ್ದ ಜಿಂಕೆ ಒಂದನ್ನು ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದ ಘಟನೆ ಕುಶಾಲನಗರ ಅರಣ್ಯ ವಲಯದ ಅತ್ತೂರು ಅರಣ್ಯ ವಿಭಾಗದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಕುಶಾಲನಗರ: ಕಾಡಿನಿಂದ ಹೊರಬಂದು ದಾರಿತಪ್ಪಿ ಹೆದ್ದಾರಿ ಮೂಲಕ ಸಾಗುತ್ತಿದ್ದ ಜಿಂಕೆ ಒಂದನ್ನು ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದ ಘಟನೆ ಕುಶಾಲನಗರ ಅರಣ್ಯ ವಲಯದ ಅತ್ತೂರು ಅರಣ್ಯ ವಿಭಾಗದಲ್ಲಿ ಭಾನುವಾರ ಮುಂಜಾನೆ ನಡೆದಿದೆ.ಸುಮಾರು 10 ವರ್ಷ ಪ್ರಾಯದ ಹೆಣ್ಣು ಜಿಂಕೆ ಕುಶಾಲನಗರ ಸಮೀಪದ ಕಾಡಿನಿಂದ ಹೊರ ಬಂದಾಗ ನಾಲ್ಕು ಬೀದಿ ನಾಯಿಗಳು ಅಟ್ಟಾಡಿಸಿ ದಾಳಿ ಮಾಡಿದಾಗ ತೀವ್ರ ಗಾಯಗೊಂಡ ಜಿಂಕೆ ಸ್ಥಳದಲ್ಲಿ ಮೃತಪಟ್ಟಿದೆ.
ಜಿಂಕೆಯ ಮೇಲೆ ದಾಳಿ ಮಾಡಿದ ನಾಯಿಗಳು ಜಿಂಕೆಯನ್ನು ಎಳೆದಾಡಿ ಮಾಂಸ ತಿನ್ನುತ್ತಿದ್ದ ದೃಶ್ಯ ಬೆಳಗಿನ ವೇಳೆ ಪತ್ರಿಕಾ ವಿತರಣೆ ಮಾಡುತ್ತಿದ್ದ ಪತ್ರಕರ್ತ ಕುಡೆಕಲ್ ಗಣೇಶ್ ಅವರ ಗಮನಕ್ಕೆ ಬಂದಿದೆ.ತಕ್ಷಣ ನಾಯಿಗಳನ್ನು ಬೆದರಿಸಿ ಸ್ಥಳದಿಂದ ಓಡಿಸಿದ ಗಣೇಶ್ ಅವರು ಸ್ಥಳಕ್ಕೆ ತೆರಳಿ ಜಿಂಕೆಯನ್ನು ನೋಡಿದ ಸಂದರ್ಭ ಅದು ಮೃತಪಟ್ಟಿರುವುದು ಗೋಚರಿಸಿದೆ.ತಕ್ಷಣ ಸಂಬಂಧಿಸಿದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದ ಅಧಿಕಾರಿ, ಸಿಬ್ಬಂದಿ, ಮಹಜರು ನಡೆಸಿ ನಂತರ ಪಶುವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ನಂತರ ದಫನ ಮಾಡಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ತಿಳಿಸಿದ್ದಾರೆ.