ಕಾಪು: ಇಲ್ಲಿನ ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಶ್ರೀದುರ್ಗಾ ಮಹಿಳಾ ವೃಂದ ಸಹಭಾಗಿತ್ವದಲ್ಲಿ ಸಮಾಜ ಬಾಂಧವರಿಗಾಗಿ ಕೆಸರು ಗದ್ದೆ ಕ್ರೀಡಾ ಮೇಳ ಗಾದೆಂತ್ ಕ್ಹೇಳ್ ಮೇಳ್ ಭಾನುವಾರ ಸಡಂಬೈಲು ಅನಂತರಾಮ ವಾಗ್ಲೆ ಇವರ ಗದ್ದೆಯಲ್ಲಿ ಜರುಗಿತು.

ಈ ಕ್ರೀಡಾಮೇಳವನ್ನು ಉದ್ಯಮಿ ರಾಮಚಂದ್ರ ಪ್ರಭು ಪಡುಬೆಳ್ಳೆ, ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಮಹಿಳಾ ವೇದಿಕೆಯ ಅಧ್ಯಕ್ಷೆ ವನಿತಾ ದೇವೇಂದ್ರ ಬೋರ್ಕಾರ್, ಸೇವಾವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್ ಸಹಿತ ಸಮಾಜದ ಗಣ್ಯರು ಗದ್ದೆಗೆ ಹಾಲು ಎರೆಯುವ ಮೂಲಕ ಚಾಲನೆ ನೀಡಿದರು. ಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ನಿರೂಪಿಸಿದರು.

ನಂತರ ವಿವಿಧ ರೀತಿಯ ಆಟೋಟ ಕ್ರೀಡಾ ಸ್ಫರ್ಧೆಗಳು, ಮಡಕೆ ಒಡೆಯುವುದು, ಹಗ್ಗ ಜಗ್ಗಾಟ, ಸೇರಿದಂತೆ ಮಕ್ಕಳಿಗೆ, ಯುವಕರಿಗೆ ಹಾಗೂ ಹಿರಿಯ ನಾಗರಿಕರಿಗೆ ವೈವಿಧ್ಯಮಯ ಜನಪದೀಯ ಸ್ಫರ್ಧೆಗಳು ನಡೆದವು. ಸಂಜೆ ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಜಯರಾಜ್ ಪಾಟ್ಕರ್ ಇನ್ನಂಜೆ ಅವರನ್ನು ಸನ್ಮಾನಿಸಲಾಯಿತು. ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಪ್ರಮುಖರಾದ ಸತ್ಯಪ್ರಸಾದ್ ಶೆಣೈ, ಡಾ.ಸುಮತಿ ಪ್ರಭು, ಕಮಲಾ ಪ್ರಭು, ನಿವೃತ್ತ ಶಿಕ್ಷಕ ಲಕ್ಷ್ಮಣ ನಾಯಕ್ ಬಹುಮಾನಗಳನ್ನು ವಿತರಿಸಿದರು. ಕೆ.ಆರ್.ಪಾಟ್ಕರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ದೇವದಾಸ್ ಪಾಟ್ಕರ್ ನಿರೂಪಿಸಿದರು. ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.