ಉಡುಪಿ: ಆಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ, ಇದೇ ರೀತಿ ಜ್ಞಾನವ್ಯಾಪಿ, ಮಥುರ ಹಾಗೂ ಎಲ್ಲೆಲ್ಲ ಹಿಂದುಗಳಿಗೆ ಅನ್ಯಾಯವಾಗಿದೆ ಅಲ್ಲೆಲ್ಲ ಹಿಂದುಗಳ ಜೊತೆ ಕಾಂಗ್ರೆಸ್ ನಿಲ್ಲಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ರಾಮಮಂದಿರದಲ್ಲಿ ನಡೆದ ಹಗರಣದ ಬಗ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಒಂದು ಕಾಲದಲ್ಲಿ ರಾಮ ಎಂಬವರ ಕಾಲ್ಪನಿಕ ಎಂದು ಕೋರ್ಟಿಗೆ ಅಫಿದಾವಿತ್ ಸಲ್ಲಿಸಿದ, ರಾಮ ಮಂದಿರಕ್ಕೆ ಶಿಲಾನ್ಯಾಸ ಸಮಾರಂಭವನ್ನೇ ಬಹಿಷ್ಕರಿಸಿದ, ಅದರ ವಿರುದ್ಧ ಕಪ್ಪುಪಟ್ಟಿ ಧರಿಸಿದ, ರಾಮ ಮಂದಿರ ಶಿಲಾನ್ಯಾಸದ ವೇಳೆ ರಕ್ತದ ಒಕುಳಿ ಹರಿಯುತ್ತದೆ ಎಂದು ಬೆದರಿಕೆ ಹಾಕಿದ, ಬಾಬರಿ ಮಸೀದಿಯನ್ನು ಒಡೆದಾಗ ರಾಮ ಭಕ್ತರನ್ನು ಗುಂಡಿಟ್ಟು ಕೊಂದು ಸರಯು ನದಿಗೆ ಎಸೆದ ಕಾಂಗ್ರೆಸ್‌ನ ನಾಯಕರು ಇವತ್ತು ರಾಮನ ಬಗ್ಗೆ ಮಾತನಾಡುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ ಎಂದು ಕೋಟ ಸ್ವಾಗತಿಸಿದರು.ಶ್ರೀ ರಾಮ ಮಂದಿರದ ಕಾಣಿಕೆ ಹುಂಡಿಯ ಹಣ ದುರುಪಯೋಗದ ವಿಚಾರವನ್ನು ಎಲ್ಲಾ ರಾಮಭಕ್ತರು ಖಂಡಿಸುತ್ತಾರೆ. ಈ ಪ್ರಕರಣದ ಬಗ್ಗೆ ಅಲ್ಲಿನ ಸರ್ಕಾರ ಎಸ್ಐಟಿ ರಚಿಸಿದೆ.

ದುರುಪಯೋಗವಾದ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಲಾಗುತ್ತದೆ, ದುರುಪಯೋಗ ಮಾಡಿದವರನ್ನು ಜೈಲಿಗೆ ಅಟ್ಟುತ್ತಾರೆ, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರಾಮ ಮೆಚ್ಚುವ ಕೆಲಸ ಮಾಡುತ್ತಾರೆ ಎಂದು ಕೋಟ ವಿಶ್ವಾಸ ವ್ಯಕ್ತಪಡಿಸಿದರು.ನಾನು ಕಾಂಗ್ರೆಸ್ಸಿನವರಲ್ಲಿ ಕೇಳುವುದು ಇಷ್ಟೇ, ನಿಮಗೆ ದಿಡೀರ್ ಆಗಿ ರಾಮನ ಬಗ್ಗೆ ಭಕ್ತಿ ಪ್ರೀತಿ ಮೂಡಿರುವುದು, ನಿಮ್ಮ ಮನ ಪರಿವರ್ತನೆ ಆಗಿರುವುದು ಒಂದು ಒಳ್ಳೆಯ ಬೆಳವಣಿಗೆ, ಆದ್ದರಿಂದ ನೀವು ಜ್ಞಾನವ್ಯಾಪಿ, ಮಥುರ ಹಾಗೂ ಎಲ್ಲೆಲ್ಲಿ ಹಿಂದುಗಳಿಗೆ ಅನ್ಯಾಯವಾಗಿದೆ ಅಲ್ಲಲ್ಲಿ ಹಿಂದೂಗಳ ಜೊತೆ ನಿಲ್ಲುತ್ತೀರಿ ಎನ್ನುವ ವಿಶ್ವಾಸವನ್ನ ನೀವು ಮತ್ತಷ್ಟು ಪ್ರಕಟಿಸಬೇಕು ಎಂದು ಆಗ್ರಹಿಸಿದರು.