ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ನಗರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಕುರಿತು ಬೃಹತ್ ಸೈಕಲ್ ಜಾಥಾ ಆಯೋಜನೆ ಮಾಡುವ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಹಾಗೂ ಯೋಜನಾ ನಿರ್ದೇಶಕ ಅಶೋಕ ಕಲಘಟಗಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಿಪಂ ಕಾರ್ಯಾಲಯದಿಂದ ಜಾಥಾಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಜಾಥಾವನ್ನು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಬರಮಾಡಿಕೊಂಡು ಮಾತನಾಡಿ, ಯಾವುದೇ ಅರ್ಹ ಮತದಾರರು ಮತದಾನ ಹಕ್ಕಿನಿಂದ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ 2026ರ ಜನೆವರಿ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಎಲ್ಲಾ ಅರ್ಹ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡುವುದು, ಮೃತಪಟ್ಟ, ಸ್ಥಳಾಂತರಗೊಂಡ ಮತದಾರರ ಹೆಸರು ತೆಗೆದು ಹಾಕುವುದು ಮತ್ತು ವಿಳಾಸ, ಇತರೆ ತಿದ್ದುಪಡಿ ಮಾಡುವುದು. ಈ ವಿಶೇಷ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ಅರ್ಹ ಪ್ರಜೆ ಮತ ಚಲಾಯಿಸುವುದರ ಮೇಲೆ ನಿಂತಿದೆ. ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವುದು. 18 ವರ್ಷ ತುಂಬಿದ ಪ್ರತಿಯೊಬ್ಬರೂ ತಪ್ಪದೇ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಮೂನೆ 6 - ಹೊಸ ಸೇರ್ಪಡೆ, ನಮೂನೆ 7 - ತೆಗೆದುಹಾಕುವಿಕೆ, ನಮೂನೆ 8 - ತಿದ್ದುಪಡಿ ಕುರಿತು ವಿವರಿಸಿ, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ? ಎಂದು ಪರಿಶೀಲಿಸಿಕೊಳ್ಳಿ. 18 ವರ್ಷ ತುಂಬಿದ ನಿಮ್ಮ ಮನೆಯ ಮಕ್ಕಳ ಹೆಸರು ಸೇರ್ಪಡೆಗೊಳಿಸಿ, ಮನೆ ಬದಲಾಯಿಸಿದ್ದರೆ ವಿಳಾಸ ತಿದ್ದುಪಡಿ ಮಾಡಿಕೊಳ್ಳಲು, ಮೃತಪಟ್ಟ ಕುಟುಂಬ ಸದಸ್ಯರ ಹೆಸರನ್ನು ತೆಗೆದುಹಾಕಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸೈಕಲ್ ಜಾಥಾ ಜಿಲ್ಲಾ ಪಂಚಾಯತಿ ಕಾರ್ಯಾಲಯದಿಂದ ಆರಂಭವಾಗಿ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಜಿಲ್ಲಾಧಿಕಾರಿಗಳ ಕಚೇರಿ, ಗಾಂಧಿ ಚೌಕ, ಸಿದ್ಧೇಶ್ವರ ದೇವಸ್ಥಾನ, ಬಸವೇಶ್ವರ ಚೌಕ ಮೂಲಕ ಗೋಳಗುಮ್ಮಟ ವರೆಗೂ ಸಾಗಿ ಸಮಾವೇಶಗೊಂಡಿತು.


ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಯೋಜನಾ ನಿರ್ದೇಶಕ ಅಶೋಕ ಕಲಘಟಗಿ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಸೇರಿದಂತೆ ಜಿಲ್ಲಾ ಸ್ವೀಪ್ ಸಮಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.