ಧಾರವಾಡ:
ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ಆಲೂರು ವೆಂಕಟರಾವ್ ಭವನದಲ್ಲಿ ಜರುಗಿದ ಯುವ ಕೌಶಲ್ಯ ಸಮಾವೇಶ ಯಶಸ್ವಿಯಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಸಿಇಒ ಭುವನೇಶ ಪಾಟೀಲ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ತರಬೇತಿಯನ್ನು ಶಾಲಾ ವಿದ್ಯಾರ್ಥಿಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜೀವನ ನಿರ್ವಹಣೆಗೆ ಪದವಿಗಳೇ ಮುಖ್ಯವಲ್ಲ. ಕೌಶಲ್ಯಗಳಿದ್ದರೆ ಉತ್ತಮ ಜೀವನವನ್ನು ನಡೆಸಬಹುದು. 20 ಸಾವಿರಕ್ಕಿಂತ ಹೆಚ್ಚು ಯುವತಿಯರು ಸಂಸ್ಥೆಯಿಂದ ತರಬೇತಿ ಪಡೆದು ತಿಂಗಳಿಗೆ ₹ 30ರಿಂದ ₹ 40 ಸಾವಿರ ಸಂಪಾದನೆ ಮಾಡುತ್ತಿದ್ದಾರೆ. ಇನ್ನೊಬ್ಬರಿಂದ ಹಣ ಪಡೆಯುವುದು ಸುಲಭ. ಆದರೆ, ಆ ಹಣವನ್ನು ಗಳಿಸುವುದು ತುಂಬಾ ಕಷ್ಟ. ಇಂತಹ ಸಂದರ್ಭದಲ್ಲಿ ಜನರಲ್ಲಿ ಕೌಶಲ್ಯ ಹೆಚ್ಚಿಸುತ್ತಿರುವುದು ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಿಇಒ ಸವಿತಾ ಸುಳಗೋಡು ಮಾತನಾಡಿ, ಮಹಿಳೆಯರಿಗೆ ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲ ರಂಗದಲ್ಲಿಯೂ ಸ್ವಾತಂತ್ರ್ಯ ಸಿಕ್ಕರೆ ಭಾರತವು ಮುಂದುವರಿದ ದೇಶವಾಗಲು ಸಾಧ್ಯ. ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಸಮಾನ ಸಮಗ್ರ ಭವಿಷ್ಯಕ್ಕಾಗಿ ಕೌಶಲ್ಯ ಕಲಿಯಬೇಕೆಂದರು.
ತರಬೇತುದಾರ ಮಹೇಶ ಮಾಶಾಳ ಮಾತನಾಡಿದರು. ರವಿಕುಮಾರ ಪಿ.ಜಿ. ನಿರೂಪಿಸಿದರು. ಗೋಪಾಲಕೃಷ್ಣ ಕಮಲಾಪುರ ಸ್ವಾಗತಿಸಿದರು. ಪಿ.ಡಿ. ನಾಯಕ ವಂದಿಸಿದರು.