ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ವಾರ್ಷಿಕ 6,51,590 ಲಕ್ಷ ರು. ಆದಾಯವನ್ನು ಆದಾಯ ತೆರಿಗೆ ಲೆಕ್ಕಾಚಾರದಲ್ಲಿ ತೋರಿಸಿದ್ದಾರೆ.ಇವರ ಬಳಿ 27,31,365 ರು. ಮೌಲ್ಯದ ಸ್ಥಿರ ಹಾಗೂ 43,50,000 ರು. ಮೌಲ್ಯದ ಚರ ಸೊತ್ತುಗಳಿವೆ ಎಂದು ಕಾಣಿಸಲಾಗಿದೆ. ಪ್ರಸ್ತುತ 80 ಸಾವಿರ ರು. ನಗದು ಹೊಂದಿದ್ದಾರೆ. ಕೆನರಾ ಬ್ಯಾಂಕ್ನಲ್ಲಿ 9,62,010 ರು. ಸಾಲ ಹೊಂದಿದ್ದಾರೆ.
ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ಐದು ಕಡೆಗಳಲ್ಲಿ ಒಟ್ಟು 152 ಸೆಂಟ್ಸ್ ಕೃಷಿ ಭೂಮಿ ಹೊಂದಿದ್ದು, ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 43,50,000 ರು. ಆಗಿದೆ ಎಂದು ತಿಳಿಸಲಾಗಿದೆ.
ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೇಲೆ 2017ರಲ್ಲಿ ಮೈಸೂರಿನ ನಂಜನಗೂಡಿನಲ್ಲಿ ದಾಖಲಾದ ಕೇಸು ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ.ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 2002ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ, 2014ರಲ್ಲಿ ಇಂದೋರ್ನ ಐಐಎಂನಲ್ಲಿ ಡಿಫೆನ್ಸ್ ಆಫೀಸರ್ಸ್ ವ್ಯಾಸಂಗ ಪೂರೈಸಿದ್ದಾರೆ.
ದಕ್ಷಿಣ ಕನ್ನಡ: ಎರಡು ನಾಮಪತ್ರ ಸಲ್ಲಿಕೆಮಂಗಳೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಾ.28ರಂದು ನಗರದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ 2 ನಾಮಪತ್ರಗಳು ಸಲ್ಲಿಕೆಯಾಗಿವೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕ್ಯಾ.ಬ್ರಿಜೇಶ್ ಚೌಟ ಹಾಗೂ ಜನತಾದಳ ಯುನೈಟೆಡ್ ಪಕ್ಷದ ಅಭ್ಯರ್ಥಿಯಾಗಿ ಸುಪ್ರಿತ್ ಕುಮಾರ್ ಪೂಜಾರಿ ಅವರ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕ್ಯಾ.ಬ್ರಿಜೇಶ್ ಚೌಟ ಅವರು ಅಧಿಕೃತವಾಗಿ ಏ.4ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.