ಬಡತನ ನಿವಾರಣೆಗೆ ಗ್ಯಾರಂಟಿ ಯೋಜನೆ ಕ್ರಾಂತಿಕಾರಕ ಕ್ರಮ

KannadaprabhaNewsNetwork | Published : Mar 29, 2024 12:45 AM

ಸಾರಾಂಶ

ಜಾತಿ ಜಾತಿ ಮಧ್ಯೆ ಜಗಳ ಹಚ್ಚುವುದು ಜಾಣತನವಲ್ಲ. ಪ್ರೀತಿ, ವಿಶ್ವಾದಿಂದ ಬೆಳೆಸುವುದು ದೊಡ್ಡತನ. ಅದೇ ರೀತಿ ದೇಶ ಕಟ್ಟುವುದು ದೊಡ್ಡತನ. ಭಾವನೆಗಳ ಮೇಲೆ ರಾಜಕೀಯ ಮಾಡುವವರಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ

ಮುಳಗುಂದ: ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ೧ ಕೋಟಿ ೧೦ ಲಕ್ಷ ಜನರನ್ನು ಬಡತನ ರೇಖೆಯಿಂದ ಮೆಲೇತ್ತುವ ಮೂಲಕ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ದೇಶಪಾಂಡೆ ಅವರ ವಾಡೆಯಲ್ಲಿ ಬುಧವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಅಗತ್ಯತೆ ರಾಜ್ಯದ ಜನತೆಗೆ ಇತ್ತು. ಅದನ್ನ ಸರಿಯಾದ ರೀತಿಯಲ್ಲಿ ಜನರು ಸದ್ಬಳಕೆ ಮಾಡಿಕೊಂಡಿದ್ದಾರೆ. ಅಷ್ಟೇ ಪ್ರಾಮಾಣಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಪ್ರತಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಜಾತಿ ಜಾತಿ ಮಧ್ಯೆ ಜಗಳ ಹಚ್ಚುವುದು ಜಾಣತನವಲ್ಲ. ಪ್ರೀತಿ, ವಿಶ್ವಾದಿಂದ ಬೆಳೆಸುವುದು ದೊಡ್ಡತನ. ಅದೇ ರೀತಿ ದೇಶ ಕಟ್ಟುವುದು ದೊಡ್ಡತನ. ಭಾವನೆಗಳ ಮೇಲೆ ರಾಜಕೀಯ ಮಾಡುವವರಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ. ವಚನಭ್ರಷ್ಟ ಬಿಜೆಪಿಗೆ ಮತ ಕೇಳುವ ನೈತಿಕತೆ ಇದೆಯಾ? ಈ ಬಾರಿ ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಆನಂದ ಗಡ್ಡದೇವರಮಠ ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಅವರನ್ನು ಸಂಸತ್‌ಗೆ ಆಯ್ಕೆ ಮಾಡಿ ಕಳುಹಿಸಬೇಕು. ಜನತೆ ನಿರ್ಣಯ ಮಾಡಿದ್ದಾರೆ. ಆ ನಿರ್ಣಯ ಮತಗಳನ್ನಾಗಿ ಪರಿವರ್ತನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಅಭ್ಯರ್ಥಿ ಆನಂದ ಗಡ್ಡದೇವರಮಠ ಮಾತನಾಡಿ, ಜನಪ್ರತಿನಿಧಿ ಜನರ ನಡುವೆ ಇದ್ದು, ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನ ಬಗೆಹರಿಸುವಂಥವರು ಈ ಕ್ಷೇತ್ರಕ್ಕೆ ಬೇಕಾಗಿದೆ ಮತ್ತು ಕ್ಷೇತ್ರದ ಜನತೆಯ ಆಸೆಯೂ ಅದೇ ಆಗಿದೆ ಎಂದರು.

ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಭಾರತದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ. ಸಂವಿಧಾನ ತಿದ್ದುಪಡಿ ಮಾಡುವ ಕುತಂತ್ರ ನಡೆದಿದೆ. ಆದ್ದರಿಂದ ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಮುಖಂಡರಾದ ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪುರ, ಕೃಷ್ಣಗೌಡ ಪಾಟೀಲ ಇದ್ದರು.

Share this article