ಮದ್ಯದ ಅಂಶದ ಆಧಾರದಲ್ಲಿ ಏಪ್ರಿಲ್‌ನಿಂದ ಸುಂಕ ವ್ಯವಸ್ಥೆ ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತೆರಿಗೆ ಸೋರಿಕೆ ತಡೆಗೆ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಮದ್ಯದ 16 ಸ್ಲ್ಯಾಬ್‌ ಅನ್ನು 8ಕ್ಕೆ ಇಳಿಸಲು ಮುಂದಾಗಿದ್ದು, ಒಟ್ಟಾರೆ 45 ಸಾವಿರ ಕೋಟಿ ರು. ರಾಜಸ್ವ ಸಂಗ್ರಹಿಸುವ ಗುರಿ ಹೊಂದಿದ್ದಾರೆ.

ಫೆಬ್ರವರಿ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ ಒಟ್ಟು 36,497 ಕೋಟಿ ರು. ರಾಜಸ್ವ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.12.7ರಷ್ಟು ಬೆಳವಣಿಗೆಯಾಗಿದೆ. 2026-27ನೇ ಸಾಲಿಗೆ ಅಬಕಾರಿ ಇಲಾಖೆಗೆ 45 ಸಾವಿರ ಕೋಟಿ ರು. ರಾಜಸ್ವ ಸಂಗ್ರಹ ಗುರಿ ನೀಡಲಾಗಿದೆ. ಮದ್ಯದ ಅಂಶ (ಆಲ್ಕೋಹಾಲ್‌ ಪ್ರಮಾಣ) ಆಧರಿಸಿ ಏಪ್ರಿಲ್‌ನಿಂದ ಸುಂಕ ವ್ಯವಸ್ಥೆ ಜಾರಿಯಾಗಲಿದೆ. ಮೂರ್ನಾಲ್ಕು ವರ್ಷದಲ್ಲಿ ಈ ಪ್ರಕ್ರಿಯೆ ಹಂತಹಂತವಾಗಿ ಪೂರ್ಣಗೊಳ್ಳಲಿದೆ.

ತೆರಿಗೆ ಸೋರಿಕೆ ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‌ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ಡ್ಇ-ಲಾಕ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಪಾರದರ್ಶಕತೆ ಹೆಚ್ಚಿಸಲು ಅಬಕಾರಿ ಉಪ ಅಧೀಕ್ಷಕರು ಮತ್ತು ಅಬಕಾರಿ ಅಧೀಕ್ಷಕರುಗಳ ವರ್ಗಾವಣೆಯನ್ನು ಡಿಜಿಟಲ್ ಕೌನ್ಸೆಲಿಂಗ್ ಮೂಲಕ ಮಾಡಲು ಕ್ರಮಕೈಗೊಳ್ಳಲಾಗುವುದು.


ಶೀಘ್ರದಲ್ಲೇ ಕರಡು ವರದಿ ಸಲ್ಲಿಕೆ:

ರಾಜ್ಯ ಸರ್ಕಾರ ರಚಿಸಿದ್ದ ಸಂಪನ್ಮೂಲ ಕ್ರೋಢೀಕರಣ ಸಮಿತಿಯು ಹೊಸ ಅಬಕಾರಿ ತೆರಿಗೆ ಮತ್ತು ಮದ್ಯ ನಿಯಂತ್ರಣ ರೂಪುರೇಷೆಗಳನ್ನು ಒಳಗೊಂಡ ಕರಡು ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಿದೆ. ಇದರ ಆಧಾರದಲ್ಲಿ ಸುಧಾರಣೆ, ಪಾರದರ್ಶಕತೆ, ನಿಯಂತ್ರಣ ಕ್ರಮ ಸೇರಿ ಇಲಾಖೆಯ ವ್ಯವಹಾರಗಳನ್ನು ಸರಳೀಕರಿಸಲಾಗುವುದು. ಅಬಕಾರಿ ಸುಂಕ ಏಕರೂಪವಾಗಿರಲಿದ್ದು, ಮದ್ಯದ ಬೆಲೆಯಲ್ಲಿ ತೀವ್ರ ಬದಲಾವಣೆಯಾಗದೆ, ಕ್ರಮೇಣವಾಗಿ ವ್ಯತ್ಯಾಸವಾಗುವಂತೆ ಖಚಿತ ಪಡಿಸಲಾಗುವುದು.

ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತ

ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆ ಆಧಾರ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಲ್ಯಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು. ದರ ನಿಗದಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸಲು ಪ್ರಸ್ತುತ ಇರುವ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಲಾಗುವುದು.

ಉತ್ಪಾದನಾ ಸನ್ನದುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಿ, ಯಾವುದೇ ಹಸ್ತಕ್ಷೇಪವಿಲ್ಲದೆ ಅನುಮೋದಿಸಲಾಗುವುದು. ಡಿಸ್ಟಿಲರಿಗಳು ಮತ್ತು ಬ್ರೂವರಿಗಳಿಗೆ 24 ಗಂಟೆಗಳ ಕಾರ್ಯಾಚರಣೆ ಮತ್ತು ರವಾನೆಗೆ ಅನುಮತಿ ನೀಡಲಾಗುವುದು. ಬಿಯರ್ ಲೇಬಲ್‌ಗಳಲ್ಲಿ ಮಾಲ್ಟ್ ಮತ್ತು ಸಕ್ಕರೆ ಅಂಶ ಕಡ್ಡಾಯವಾಗಿ ನಮೂದಿಸುವ ಅಗತ್ಯತೆ ರದ್ದುಗೊಳಿಸಲಾಗುವುದು.

ಮದ್ಯ ವಲಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಡಿಸ್ಟಿಲರಿಗಳು ಮತ್ತು ಬ್ರೂವರಿಗಳು ಪ್ರವಾಸಿಗರಿಗೆ ಮದ್ಯ ಸವಿಯಲು ಮತ್ತು ತಮ್ಮ ಆವರಣದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ಸಂಪನ್ಮೂಲ ಕ್ರೋಢೀಕರಣ ಸಮಿತಿಯ ಕರಡು ವರದಿ ಶೀಘ್ರದಲ್ಲೇ ಸಾರ್ವಜನಿಕ ಸಮಾಲೋಚನೆಗೆ ಇಡಲಾಗುವುದು. ಅಗತ್ಯ ಸುಧಾರಣೆಗಳನ್ನು ಸಮಗ್ರವಾಗಿ ಹೊಸ ಅಬಕಾರಿ ಮಸೂದೆಯಲ್ಲಿ ಪರಿಚಯಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.