ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಲಾಗುತ್ತಿದ್ದು, ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪರಮೇಶ್ವರ್‌, ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಜತೆಗೂಡಿ ಈಗಾಗಲೇ ಬೆಳಗಾವಿ ಕಂದಾಯ ವಿಭಾಗ, ಕಲಬುರಗಿ ಕಂದಾಯ ವಿಭಾಗ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಇದೀಗ ಇಡೀ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸಿ, ಪರಿಹಾರ ಸೂಚಿಸಲು ಭಾನುವಾರ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಸಲಹೆ, ಸೂಚನೆ ನೀಡಲಾಗುವುದು ಎಂದರು.

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ರು. ಅನುದಾನ

ರಾಜ್ಯದಲ್ಲಿ ಮಳೆ ಕೊರತೆ ಕಾರಣದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ತಡೆಯಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು ಪೂರೈಕೆಗಾಗಿಯೇ 329 ಕೋಟಿ ರು. ನೀಡಲಾಗಿದೆ. ಅದರೊಂದಿಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಸುಮಾರು 600 ಕೋಟಿ ರು. ಲಭ್ಯವಿದ್ದು, ಅದನ್ನು ಅಗತ್ಯ ಸಂದರ್ಭದಲ್ಲಿ ಬಳಸುವಂತೆ ಸೂಚಿಸಲಾಗಿದೆ. ಹಾಗೆಯೇ, ರಾಜ್ಯದ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಾವು ಸುಮ್ಮನೆ ಕೂರದೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.


ಜೂನ್‌ ತಿಂಗಳಲ್ಲಿ ಭಾರಿ ಮಳೆಯ ಕೊರತೆಯ ಬಳಿಕ ಜುಲೈನಲ್ಲಿ ಉತ್ತಮ ಮಳೆಯಾಗದೇ ಇದ್ದರೆ ರಾಜ್ಯವು 150 ವರ್ಷಗಳಲ್ಲೇ ಕಂಡುಕೇಳರಿಯದ ಭೀಕರ ಬರಕ್ಕೆ ತುತ್ತಾಗಲಿದೆ ಎಂದು ಇತ್ತೀಚೆಗೆ ಸ್ವತಃ ಕಂದಾಯ ಸಚಿವ ಪರಮೇಶ್ವರ್‌ ಆತಂಕ ವ್ಯಕ್ತಪಡಿಸಿದ್ದರು.

- ಜುಲೈ ಅರ್ಧಭಾಗ ಕಳೆದರೂ ರಾಜ್ಯದಲ್ಲಿ ಇನ್ನೂ ಚೇತರಿಕೆ ಕಾಣದ ಮುಂಗಾರು ಮಳೆ

- ಈವರೆಗೂ ರಾಜ್ಯದಲ್ಲಿ ಶೇ.30ಕ್ಕೂ ಹೆಚ್ಚು ಮಳೆಯ ಕೊರತೆ, ಭಾರೀ ಬರದ ಆತಂಕ

- ಈ ಹಿನ್ನೆಲೆಯಲ್ಲಿ ಈಗಾಗಲೇ ಕಂದಾಯ ವಿಭಾಗವಾರು ಅಧಿಕಾರಿಗಳ ಜೊತೆಗೆ ಚರ್ಚೆ

- ಜೊತೆಗೆ ಬರ ಅಧ್ಯಯನಕ್ಕೆ ತಂಡ ಕಳಿಸುವಂತೆ ಪ್ರಧಾನಿಗೆ ಸಿಎಂ ಡಿಕೆಶಿ ಪತ್ರ ರವಾನೆ

- ಅದರ ಬೆನ್ನಲ್ಲೇ ಭಾನುವಾರ ಜಿಲ್ಲಾಧಿಕಾರಿಗಳು, ಸಿಇಒ ಜೊತೆಗೆ ಸಿಎಂ ಮಹತ್ವದ ಸಭೆ

- ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆವ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

- ಸಭೇಲಿ ಲಭ್ಯವಾಗುವ ಮಾಹಿತಿ ಅಧರಿಸಿ ಕೈಗೊಳ್ಳಬೇಕಾದ ಕ್ರಮ ಬಗ್ಗೆ ಸಿಎಂ ಸೂಚನೆ