ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿಗೆ ಸಮೀಪದ ವೆಸ್ಟ್ ಕೊಳಕೇರಿಯ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ಎತ್ತು ಪೋರಾಟ, ಕಲಶ ಪೂಜೆ ವಿಜೃಂಭಣೆಯಿಂದ ನಡೆಯಿತು. ಅಧಿಕ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಾ.23 ರಂದು ಪಟ್ಟಣಿ ಹಬ್ಬ ಜರುಗಿ ಮಧ್ಯಾಹ್ನ ದೇವರ ಪ್ರದರ್ಶನ ಬಲಿ, ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಿಸಿ ಅನ್ನದಾನ ಜರುಗಿತು. 24ರಂದು ಆಟ್ ಪಾಟ್ , ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ಜಳಕ, 25ರಂದು ದೇವರ ಕಳಸ, 26ರಂದು ಬೋಟೆಕಾರ ದೇವರ ಹಬ್ಬ ನಡೆಯಿತು.
ಭಕ್ತಾದಿಗಳು ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಕುಶಾಲನಗರ-ಕಾವೇರಿಗೆ 157ನೇ ಮಹಾ ಆರತಿ:ತನ್ನ ಹರಿವು ನಿಲ್ಲಿಸಿರುವ ಜೀವನದಿ ಕಾವೇರಿ ಆದಷ್ಟು ಶೀಘ್ರದಲ್ಲಿ ಹರಿಯುವ ಮೂಲಕ ನಾಡಿನ ಜನತೆಗೆ ಒಳಿತು ಉಂಟು ಮಾಡಲಿ ಎಂದು ಕುಶಾಲನಗರದ ಕಾವೇರಿ ನದಿ ತಟದಲ್ಲಿ ಹುಣ್ಣಿಮೆಯ ಅಂಗವಾಗಿ ನಡೆದ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ನದಿ ತಟದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 157ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಅಷ್ಟೋತ್ತರ, ಕುಂಕುಮಾರ್ಚನೆ ನಂತರ ಮಹಾ ಆರತಿ ಬೆಳಗಿ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ ಕಾವೇರಿ ನಾಡಿನ ಜನತೆಯನ್ನು ಜಲಕಂಟಕದಿಂದ ಪಾರು ಮಾಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭ ಮಾತನಾಡಿದ ಶ್ರೀ ಮುತ್ತಪ್ಪನ್ ದೇವಾಲಯದ ಆಡಳಿತ ಮಂಡಳಿಯ ಪ್ರಮುಖ ಬಳಪಂಡ ಪವನ್, ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮೂಲದಿಂದ ಅಂತ್ಯ ತನಕ ಪ್ರಾಕೃತಿಕವಾಗಿ ಹರಿಯುವ ನದಿಯ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಜವಾಬ್ದಾರಿಯಾಗಿದೆ ಎಂದರು.ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಸ್ವಚ್ಛತಾ ಅಭಿಯಾನದ ಪ್ರಮುಖರಾದ ಡಿ ಆರ್ ಸೋಮಶೇಖರ್, ಮಂಡೆಪಂಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು.