ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಶೀಘ್ರ ಮತ್ತೊಬ್ಬ ಶ್ರೀ ನೇಮಕ

KannadaprabhaNewsNetwork |  
Published : Jul 20, 2025, 01:17 AM IST
ಸಸಸಸಸಸಸಸಸಸಸ | Kannada Prabha

ಸಾರಾಂಶ

ನಾವು ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮನೆ ಮಾಡಿಕೊಂಡು ಧರ್ಮ ಕಾರ್ಯ ಮರೆತಿದ್ದಾರೆ

ಹುಬ್ಬಳ್ಳಿ: ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಕೂಡಲ ಸಂಗಮ ಪಂಚಮಸಾಲಿ ಪೀಠದ ಟ್ರಸ್ಟ್‌ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಜಟಾಪಟಿ ಇನ್ನಷ್ಟು ತೀವ್ರವಾಗಿದ್ದು, ಪೀಠಕ್ಕೆ ಬೇರೆ ಗುರುಗಳನ್ನು ನೇಮಿಸಿ, ಪರ್ಯಾಯ ವ್ಯವಸ್ಥೆ ಮಾಡುವುದು ಶತಃಸಿದ್ಧ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.

ಶನಿವಾರ ಅತ್ತ ಸ್ವಾಮೀಜಿ ಅನಾರೋಗ್ಯದಿಂದ ಬಾಗಲಕೋಟೆಯಲ್ಲಿ ಆಸ್ಪತ್ರೆ ಸೇರಿದರೆ ಇತ್ತ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಶಪ್ಪನವರ, ಅವರು ಆಸ್ಪತ್ರೆ ಸೇರಿರುವುದು ಪ್ರಚಾರದ ಒಂದು ಭಾಗ, ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಶ್ರೀಗಳು ಲೋಕ ಸಂಚಾರಿಯಾಗಿ ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮನೆ ಮಾಡಿಕೊಂಡು ಧರ್ಮ ಕಾರ್ಯ ಮರೆತಿದ್ದಾರೆ ಎಂದರು.

ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮ ಮಾಡಬೇಕು, ಶುದ್ಧ ಬಸವತತ್ವದ ಅನುಷ್ಠಾನ ಮಾಡಬೇಕೆಂಬುದು ನಮ್ಮ ಮತ್ತು ಸಮಾಜದ ನಿರೀಕ್ಷೆಯಾಗಿತ್ತು. ಅವರ ಓಡಾಟ ಬಹಳಷ್ಟಾಗಿದೆ. ರಾಜಕಾರಣಿಗಳ ಒಡನಾಟ ಹೆಚ್ಚಾಗಿದೆ. ರಾಜಕೀಯದಲ್ಲಿ ಅವರ ಹಸ್ತಕ್ಷೇಪ ಬಹಳ ಆಯ್ತು. ಅಧಿಕಾರಗಳ ವರ್ಗಾವಣೆಯಂತ ವಿಷಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಇದು ಶ್ರೀಗಳ ಕೆಲಸ ಅಲ್ಲ. ಬಸವ ತತ್ವ ಅನುಷ್ಠಾನ ಮಾಡುವ ಪೀಠದಲ್ಲಿದ್ದು ಧರ್ಮ ಕಾರ್ಯದಲ್ಲಿ ತೊಡಗುವವರನ್ನು ನಾವು ಗುರುಗಳನ್ನಾಗಿ ಮಾಡುವ ಚಿಂತನೆ ಮಾಡಿದ್ದೇವೆ, ಮಾಡಿಯೇ ತೀರುತ್ತೇವೆ. ಇದು ಶತಸಿದ್ಧ ಎಂತಲೂ ಹೇಳಿದರು.

ಬಸವಜಯ ಮೃತ್ಯುಂಜಯ ಶ್ರೀಗಳ ವರ್ತನೆ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ 2019 ರಲ್ಲಿ ಟ್ರಸ್ಟ್‌ನಿಂದ ನೋಟಿಸ್ ನೀಡಿದಾಗ ತಿದ್ದಿಕೊಳ್ಳುವುದಾಗಿ ಲಿಖಿತವಾಗಿ ತಿಳಿಸಿದರು. ಆದರೂ ಅವರು ತಮ್ಮ ನಡವಳಿಕೆ ತಿದ್ದಿಕೊಳ್ಳದೇ ಒಂದು ಪಕ್ಷ, ಕೆಲ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಗ್ರ ನಾಯಕರು ಸ್ವಾಮೀಜಿಗಳಿಗೆ ಹುಬ್ಬಳ್ಳಿ-ಬೆಳಗಾವಿ ನಡುವೆ ಮಠ ಕಟ್ಟುವುದಾಗಿ ಹೇಳಿದ್ದಾರೆ. ಶ್ರೀಗಳೇ ಖುದ್ದು ಮಲಪ್ರಭಾ ನದಿ ದಂಡೆ ಮೇಲೆ ಮಠ ಕಟ್ಟಿಕೊಳ್ಳುವುದಾಗಿಯೂ ಹೇಳಿದ್ದಾರೆ. ಹೀಗಾಗಿ, ಅವರಿಗೆ ಹೊರಗೆ ಹೋಗಿ ಅಂತ ಹೇಳಲು ನಾವ್ಯಾರು? ಪೀಠ ಬಿಟ್ಟು ಹೋಗಿ ಅಂತ ಹೇಳುವಷ್ಟು ನಾವು ದೊಡ್ಡವರಲ್ಲ. ಅವರೇ ಮಠ ಬಿಟ್ಟು ಹೋಗುತ್ತೇವೆ ಎಂದಿದ್ದಾರೆ. ಅವರಾಗಿಯೇ ಹೋದರೆ ಸಂತೋಷ. ಒಟ್ಟಿನಲ್ಲಿ ಮಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡೋದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.

ಮಲಪ್ರಭಾ ಕಾಲುವೆ ದಡದಲ್ಲಿ ಹೊಸ ಮಠ ಕಟ್ಟಿ ಅಲ್ಲಿ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ. ಇದನ್ನು ಟ್ರಸ್ಟ್ ಸ್ವಾಗತಿಸುತ್ತದೆ. ಅವರು ಪರ್ಯಾಯ ಮಠ ಆರಂಭಿಸುವುದಾದರೇ ಆರಂಭಿಸಲಿ ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.

ಶ್ರೀಗಳು ಬಿಜೆಪಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ. ಅವರು ಅಧಿಕೃತವಾಗಿ ಬಿಜೆಪಿ ಸೇರಿದಂತಾಗಿದೆ. ಅವರು ಪ್ರಚಾರ ಪ್ರಿಯರು, ಯಾವಾಗಲೂ ಫೇಸ್ ಬುಕ್, ವಾಟ್ಸ್ ಆ್ಯಪ್, ಮಾಧ್ಯಮ ಅಂತೆಲ್ಲ ಇರುತ್ತಾರೆ. ಅವರಿಗೆ ಸಮಾಜದ ಬಗ್ಗೆ ಕಳಕಳಿಯಿಲ್ಲ ಎಂದು ಕಿಡಿಕಾರಿದರು.

2ಎ ಬೇಕಾ, 2ಡಿ ಬೇಕಾ?: ಸ್ವಾಮೀಜಿಗಳು, ಸಮಾಜದ ಅಗ್ರಗಣ್ಯ ನಾಯಕರೆಂದು ಹೇಳಿಕೊಳ್ಳುವವರು ಸಮಾಜಕ್ಕೆ 2ಎ ಅಥವಾ 2ಡಿ ಮೀಸಲಾತಿ ಬೇಕಾ ಎಂಬುವುದನ್ನು ಬಗ್ಗೆ ಸ್ಪಷ್ಟಪಡಿಸಲಿ. ಒಂದು ವೇಳೆ 2ಡಿ ಮೀಸಲಾತಿ ಬೇಕಾದರೆ ಸರ್ಕಾರದಿಂದ ನಮ್ಮ ಮಕ್ಕಳಿಗೆ 2ಡಿ ಪ್ರಮಾಣಪತ್ರ ಕೊಡಿಸಲಿ ಎಂದು ಸವಾಲು ಹಾಕಿದ ಅವರು, ಹಿಂದಿನ ಸರ್ಕಾರ 2ಬಿ ಮೀಸಲಾತಿ ಕಡಿತಗೊಳಿಸಿ ನಮಗೆ 2ಡಿ ಮೀಸಲಾತಿ ನೀಡಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಅಲ್ಲದೆ ಹಿಂದಿನ ಸರ್ಕಾರವೇ 2ಬಿ ಮೀಸಲಾತಿಯಲ್ಲಿ ಕಡಿತ ಮಾಡುವುದಿಲ್ಲ ಎಂದು ಹಿಂಬರಹ ನೀಡಿದೆ. ಸುಪ್ರೀಂಕೋರ್ಟ್‌ ತಡೆಯಾಜ್ಞೆ ತೆರವು ಮಾಡಿದರೆ 2ಡಿ ಮೀಸಲಾತಿ ಬಿದ್ದು ಹೋಗುತ್ತದೆ. ಅದಕ್ಕೆ ಸಂವಿಧಾನದ ಮಾನ್ಯತೆ ಇಲ್ಲ.

ನಮ್ಮ ಟ್ರಸ್ಟ್‌ನ ಬೇಡಿಕೆ ಅಚಲವಾಗಿದ್ದು, ನಾವು 2ಎ ಮೀಸಲಾತಿ ಬೇಕು ಎಂದು ಹೋರಾಟ ಮುಂದುವರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಭರವಸೆ ಇದ್ದು, ಅವರು ನಮಗೆ 2ಎ ಮೀಸಲಾತಿ ದೊರಕಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನೀಲಕಂಠ ಅಸೂಟಿ, ಪ್ರಭಣ್ಣ ಹುಂಚಿಕಟ್ಟಿ, ಮಲ್ಲಪ್ಪ ದಾಟನಾಳ, ಕಲ್ಲಪ್ಪ ಎಲಿವಾಳ, ಸಂಗಪ್ಪ ಸೇರಿದಂತೆ ಇನ್ನಿತರರು ಇದ್ದರು.

ಮಠದ ರಕ್ಷಣೆಗಾಗಿ ಬೀಗ: ಕಾಶಪ್ಪನವರ ಸ್ಪಷ್ಟನೆ

ಇತ್ತೀಚೆಗೆ ಸ್ವಾಮೀಜಿಗಳು ಮಠಕ್ಕೆ ಬರುವುದೇ ಅಪರೂಪವಾಗಿದೆ. ಹೀಗಾಗಿ, ಅಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ. ಮಠದ ರಕ್ಷಣೆಗಾಗಿ ಇತ್ತೀಚೆಗೆ ಗೇಟ್, ಸಿಸಿ ಟಿವಿ ಅಳವಡಿಸಲಾಗಿದೆ. ಸ್ವಾಮೀಜಿ ಸ್ವತಃ ಬಂದು ಬೀಗ ಕೇಳಿದ್ದರೆ ಅಲ್ಲಿದ್ದವರೇ ಕೊಡುತ್ತಿದ್ದರು. ಆದರೆ, ಅವರ ಸೂಚನೆ ಮೇರೆಗೆ ಏಳು ಜನರು ಬಂದು ಏಕಾಏಕಿ ಬೀಗ ಮುರಿದಿದ್ದಾರೆ. ಅಷ್ಟೇ ಅಲ್ಲದೇ ಮರುದಿನ ಶ್ರೀಗಳು ಬಸವಮಂಟಪಕ್ಕೆ ಬಂದು ಸುಖಾಸುಮ್ಮನೆ ಮಠಕ್ಕೆ ಬಾರದಂತೆ ನನ್ನನು ತಡೆದಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆಪಾದನೆ ಮಾಡಿದ್ದಾರೆ. ಶ್ರೀಗಳನ್ನು ತಡೆಯುವ ಪ್ರಶ್ನೆ ಇಲ್ಲ. ಅವರೇ ಬಂದು ಅಥವಾ ಕರೆ ಮಾಡಿ ಬೀಗ ಕೇಳಿದ್ದರೆ ಯಾವುದೇ ಸಮಸ್ಯೆ ಇರಲ್ಲಿಲ್ಲ. ಉದ್ದೇಶಪೂರ್ವಕವಾಗಿಯೇ ಬೀಗ ಒಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

PREV

Latest Stories

ಒಳಮೀಸಲಾತಿ ಜಾರಿ ಮಾಡದಿದ್ದರೆ, ಕರ್ನಾಟಕ ಬಂದ್‌: ಮಾಜಿ ಸಚಿವ ನಾರಾಯಣಸ್ವಾಮಿ
ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಮುಖ್ಯ: ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಮಕ್ಕಳಿಂದ ಪರಿಸರ ಸ್ನೇಹಿ ಇಟ್ಟಿಗೆ ತಯಾರಿ: ರವೀಂದ್ರ ರುದ್ರವಾಡಿ