ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಸಮೀಪದ ಧನಸಿಂಗ್ ನಾಯಕ ತಾಂಡಾದಲ್ಲಿ ಸಿಡಿಲು ಬಡಿದು ಮಹೇಶ ಕಿಶನ್ ಚವ್ಹಾಣ (22) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿಯಿತು.ಚಿಂಚೋಳಿ ತಾಲೂಕಿನ ಹಲವೆಡೆ ಗುಡುಗು, ಮಿಂಚು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಧಾರವಾಡದಲ್ಲಿ ಸಂಜೆ 6ರ ಸುಮಾರಿಗೆ ವಿಪರೀತ ಗಾಳಿಯೊಂದಿಗೆ ಮಳೆ ಸುರಿದಿದ್ದು, ನೂರಾರು ಮರಗಳು ಧರೆಗುರುಳಿವೆ. ನಗರದ ಉಪ ನಗರ ಪೊಲೀಸ್ ಠಾಣೆ ಎದುರು, ಅರಣ್ಯ ಇಲಾಖೆ ಆವರಣದಲ್ಲಿ, ಸಾಧನಕೇರಿಯಲ್ಲಿ ಮರಗಳು ಬಿದ್ದು ಕಾರುಗಳು ಜಖಂ ಆಗಿವೆ. ನಾರಾಯಣಪುರ-ಜಿಮಖಾನ್ ಎದುರಿನ ರಸ್ತೆ ಕೆಲ ಕಾಲ ಬಂದ್ ಆಗಿತ್ತು.
ಗದಗ ಜಿಲ್ಲೆಯ ನರಗುಂದ, ಡಂಬಳ, ಮುಳಗುಂದ, ಮುಂಡರಗಿ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಸುರಿದ ಭಾರಿ ಮಳೆ-ಗಾಳಿಗೆ ಮೂರು ಮನೆಗಳ ಛಾವಣಿಗಳು ಹಾರಿ ಹೋಗಿವೆ.ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಬಾಳೂರಿನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಉರುಳಿದ ಪರಿಣಾಮ ಸವಾರ ನೇರಲಮನೆ ಗ್ರಾಮದ ಚಂದ್ರಶೇಖರ್ (53) ಎಂಬುವರು ಗಾಯಗೊಂಡಿದ್ದಾರೆ. ಪಟ್ಟಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ಹಲವು ಕಡೆ ಮರಗಳು ಉರುಳಿ, ವಿದ್ಯುತ್ ವ್ಯತ್ಯಯ ಉಂಟಾಗಿತ್ತು.