ಸೋಮರಡ್ಡಿ ಅಳವಂಡಿ
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಕಾಂಗ್ರೆಸ್ ಕುರಿತು ಮುನಿಸುಕೊಂಡ ಬೆನ್ನಲ್ಲೇ ಕೊಪ್ಪಳದ ಕೆಲವು ಮುಸ್ಲಿಂ ಮುಖಂಡರು ಈ ಕಸರತ್ತು ನಡೆಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್-2 ನೇಮಕ ಅಧಿಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ನೀಡುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೆಂಡಾಮಂಡಲರಾಗಿದ್ದಾರೆ. ಹಿಟ್ನಾಳ ಕುಟುಂಬದ ವಿರುದ್ಧ ದಿನೇ ದಿನೇ ಕೆಂಡ ಉಗುಳುತ್ತಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದೇ ಹಿಟ್ನಾಳ ಕುಟುಂಬ, ನನಗೆ ಕಳುಹಿಸಿದ್ದ ಪಾರ್ಟಿ ಫಂಡ್ನ್ನು ಹಿಟ್ನಾಳ ಕುಟುಂಬ ನನಗೆ ನೀಡಿಲ್ಲ. ಅಷ್ಟೇ ಅಲ್ಲ, ನನ್ನನ್ನು ಖುದ್ದು ಅವರೇ ಸೋಲಿಸಿದ್ದಾರೆ. ತನ್ಮೂಲಕ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಗೆಲುವಿಗೆ ಕಾರಣವಾಗಿದ್ದಾರೆ ಎಂದು ಕಿಡಿಕಾರಿಕೊಂಡಿದ್ದಾರೆ.
ಪುತ್ರನಿಗೆ ಆಹ್ವಾನ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪುತ್ರ ಇಮ್ತಿಯಾಜ್ ಅನ್ಸಾರಿ ಅವರನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸುವ ಮೂಲಕ ಹಿಟ್ನಾಳ ಕುಟುಂಬಕ್ಕೆ ಟಾಂಗ್ ನೀಡುವಂತೆ ಕೊಪ್ಪಳದ ಮುಸ್ಲಿಂ ಮುಖಂಡರಾದ ಅಪ್ಸರಸಾಬ ಹಾಗೂ ಕೆಲವು ಮುಖಂಡರು ಬೆಂಗಳೂರಿನಲ್ಲಿ ಇಕ್ಬಾಲ್ ಅನ್ಸಾರಿ ಅವರನ್ನು ಭೇಟಿಯಾಗಿ, ಪುತ್ರನನ್ನು ಕೊಪ್ಪಳ ಕ್ಷೇತ್ರದಿಂದ ಕಣಕ್ಕೆ ಇಳಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು, ಹಿಟ್ನಾಳ ಕುಟುಂಬದ ವಿರುದ್ಧ ನಾನು ಮೊದಲು ಕೆಪಿಸಿಸಿ ಮತ್ತು ಸಿ.ಎಂ. ಸಿದ್ದರಾಮಯ್ಯ ಅವರ ಗಮನಕ್ಕೆ ಎಲ್ಲ ವಿಷಯಗಳನ್ನು ತರುತ್ತೇನೆ. ನನ್ನನ್ನು ಸೋಲಿಸಿದರೂ ನಾನು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೂಚನೆಯಂತೆ ಶಕ್ತಿಮೀರಿ ಕೆಲಸ ಮಾಡಿ, ರಾಜಶೇಖರ ಹಿಟ್ನಾಳ ಅವರು ಗೆಲ್ಲುವಂತೆ ಮಾಡಿದ್ದೇನೆ. ಆದರೂ ನನಗೆ ಮತ್ತೆ ಮತ್ತೆ ಮೋಸ ಮಾಡುತ್ತಲೇ ಇದ್ದಾರೆ. ಪಕ್ಷದಲ್ಲಿ ನನಗೆ ಸೂಕ್ತ ಸ್ಥಾನ ದೊರೆಯದಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ನನ್ನನ್ನು ಕಡೆಗಣಿಸುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸದೇ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ, ಆನಂತರ ಮುಂದಿನ ವಿಚಾರ ಮಾಡೋಣ ಎಂದು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.
ಬೆಂಬಲಿಗರ ಪೋಸ್ಟ್: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಅವಮಾನ ಆಗಿರುವುದರಿಂದ ಕೊಪ್ಪಳ ಕ್ಷೇತ್ರದಿಂದ ಅವರ ಪುತ್ರನನ್ನು ಸ್ಪರ್ಧೆಗೆ ಇಳಿಸುವಂತೆ ಅನ್ಸಾರಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಇಮ್ತಿಯಾಜ್ ಪರವಾಗಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.