ದೊಡ್ಡಬಳ್ಳಾಪುರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ವಿಮಾನ ನಿಲ್ದಾಣದಲ್ಲಿ ವಿಮಾನ ಹೈಜಾಕ್ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲಾಯಿತು.
ಅಪಹರಣಕಾರರು ವಿವಿಧ ಬೇಡಿಕೆಗಳು ಈಡೆರಿಸುವಂತೆ ಸಿಬ್ಬಂದಿ ಮುಂದೆ ಬೇಡಿಕೆ ಇಟ್ಟಿದ್ದರು. ಅದನ್ನು ಓಲೈಸುವ ಹಾಗೂ ತುರ್ತು ಪ್ರತಿಕ್ರಿಯೆ ಕಾರ್ಯಾಚರಣೆಯ ಭಾಗವಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣದ ಎರಡೂ ರನ್ ವೇಗಳನ್ನು ವಿಮಾನ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಹೈಜಾಕ್ ಆಗಿದ್ದ ವಿಮಾನದಲ್ಲಿ 30 ಪ್ರಯಾಣಿಕರು ಮತ್ತು 5 ವಿಮಾನ ಸಿಬ್ಬಂದಿ ಇದ್ದರು. ದುರದೃಷ್ಟವಶಾತ್, ಅಪಹರಣಕಾರರು ಒಬ್ಬ ಪ್ರಯಾಣಿಕನನ್ನು ಕೊಂದಿದ್ದು, ಉಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸುವ ರೀತಿ ಅಣಕು ಕಾರ್ಯಾಚರಣೆ ರೂಪಿಸಲಾಗಿತ್ತು.ವಿಮಾನ ನಿಲ್ದಾಣದ ತುರ್ತು ನಿರ್ವಹಣಾ ಸಮಿತಿಯು ಅಪಹರಣದ ಪರಿಸ್ಥಿತಿಯನ್ನು ಬಗೆಹರಿಸಲು ವಿವಿಧ ಭದ್ರತಾ ಏಜೆನ್ಸಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅಪಹರಣಕಾರರೊಂದಿಗೆ ಸಂವಹನ ನಡೆಸಲು ಮತ್ತು ಅವರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಸಂಧಾನಕಾರರನ್ನು ನಿಯೋಜಿಸಲಾಗಿತ್ತು. ಇದೀಗ ಅಪಹರಣಕಾರರು ಪ್ರಯಾಣಿಕರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ನಾವು ಖಚಿತಪಡಿಸುತ್ತೇವೆ.ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ತನಿಖಾ ತಂಡವನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿಯನ್ನು ಅಣಕು ಕಾರ್ಯದಲ್ಲಿ ನೀಡಲಾಯಿತು.
ಯಾವುದೇ ಪರಿಸ್ಥಿತಿ ಅಥವಾ ಸನ್ನಿವೇಶದಲ್ಲಿ ಎಲ್ಲಾ ವಿಮಾನ ನಿಲ್ದಾಣ ಬಳಕೆದಾರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸುರಕ್ಷಿತ ವಾತಾವರಣವನ್ನು ಒದಗಿಸುವ ಗುರಿಯನ್ನು ಈ ಅಣುಕು ಪ್ರದರ್ಶನ ಹೊಂದಿತ್ತು.
ಫೋಟೋ-7ಕೆಡಿಬಿಪಿ1- ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹೈಜಾಕ್ ಅಣಕು ಪ್ರದರ್ಶನ ನಡೆಯಿತು.