ಕೋಮು ದುಷ್ಕೃತ್ಯ ಮಟ್ಟ ಹಾಕಲು ನಕ್ಸಲ್ ನಿಗ್ರಹ ಪಡೆಯಂತೆ ಪ್ರತ್ಯೇಕ ಪೊಲೀಸ್ ಪಡೆ: ಡಾ.ಪರಮೇಶ್ವರ್ ಘೋಷಣೆ- ಇನ್ನೆರಡು ವಾರಗಳಲ್ಲಿ ಕಾರ್ಯಾರಂಭ, ಕೋಮು ಸಂಬಂಧಿ ಪ್ರಕರಣಗಳ ವಿರುದ್ಧ ಈ ಪಡೆಗೆ ಸಂಪೂರ್ಣ ಅಧಿಕಾರಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿಯಲ್ಲಿ ಕೋಮು ದುಷ್ಕೃತ್ಯಗಳನ್ನು ಮಟ್ಟ ಹಾಕಲು ನಕ್ಸಲ್ ನಿಗ್ರಹ ಪಡೆಯ ರೀತಿ ಪ್ರತ್ಯೇಕ ‘ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್’ ರಚಿಸಲಾಗುವುದು. ಕೋಮು ಸಂಬಂಧಿ ಪ್ರಕರಣಗಳ ನಿಗ್ರಹಕ್ಕೆ ಈ ಟಾಸ್ಕ್ ಫೋರ್ಸ್ಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಕಟಿಸಿದ್ದಾರೆ.ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇನ್ನೆರಡು ವಾರಗಳಲ್ಲಿ ಈ ಟಾಸ್ಕ್ಫೋರ್ಸ್ ಸ್ಥಾಪನೆ ಆಗಲಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಇದು ಕಾರ್ಯಾಚರಿಸಲಿದೆ. ಈ ಪಡೆಗೆ ನಕ್ಸಲ್ ನಿಗ್ರಹ ದಳದ ಪೊಲೀಸರೂ ಸೇರಿದಂತೆ ಪ್ರತ್ಯೇಕ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಐಜಿ ಶ್ರೇಣಿ ಹಾಗೂ ಅದಕ್ಕೂ ಮೇಲ್ಪಟ್ಟ ಅಧಿಕಾರಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.ಎರಡು ಜಿಲ್ಲೆಗಳಲ್ಲಿ ಎಲ್ಲೇ ಕೋಮು ದುಷ್ಕೃತ್ಯ ನಡೆದರೂ, ಕೃತ್ಯಗಳಲ್ಲಿ ಭಾಗಿಯಾದವರು ಮಾತ್ರವಲ್ಲದೆ, ಸಹಕಾರ ನೀಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಈ ಪಡೆಗೆ ಅಧಿಕಾರ ನೀಡಲಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.ಪ್ರಚೋದನಕಾರಿ ಹೇಳಿಕೆ ವಿರುದ್ಧ ಕ್ರಮ:
ಕೋಮು ಸಂಬಂಧಿ ದೃಷ್ಕೃತ್ಯಗಳಿಗೆ ಪ್ರಚೋದನಕಾರಿ ಭಾಷಣ, ಹೇಳಿಕೆಗಳು ಕೂಡ ಕಾರಣವಾಗುತ್ತವೆ. ಹಾಗಾಗಿ ಯಾರು ಪ್ರಚೋದನಕಾರಿ ಹೇಳಿಕೆ ನೀಡುತ್ತಾರೋ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂಥವರು ಯಾರೇ ಆಗಿರಲಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಹುಟ್ಟಡಗಿಸ್ತೇವೆ:
ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ಹಾಳು ಮಾಡುವ ದುಷ್ಟ ಶಕ್ತಿಗಳು ಯಾವುದೇ ಸಮುದಾಯಕ್ಕೆ ಸೇರಿರಲಿ, ಬಿಡುವ ಮಾತೇ ಇಲ್ಲ. ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಿದ್ದೇವೆ. ಕೆಲ ವರ್ಷಗಳ ಕಾಲ ಕರಾವಳಿಯಲ್ಲಿ ಕೋಮು ಸಾಮರಸ್ಯಕ್ಕೆ ತೊಂದರೆಯಾಗುವ ಘಟನೆಗಳು ನಡೆದಿರಲಿಲ್ಲ. ಇದೀಗ ಅಶ್ರಫ್ ಮತ್ತು ಸುಹಾಸ್ ಶೆಟ್ಟಿ ಕೊಲೆ ಪ್ರಕರಣಗಳು ಕೋಮು ಸಾಮರಸ್ಯಕ್ಕೆ ಸವಾಲಾಗಿವೆ. ಇದರ ಹಿಂದೆ ಅನೇಕ ಶಕ್ತಿಗಳು ಅಡಗಿವೆ. ಅವುಗಳ ಹುಟ್ಟಡಗಿಸದೆ ಬಿಡಲ್ಲ ಎಂದು ಡಾ.ಜಿ. ಪರಮೇಶ್ವರ್ ಎಚ್ಚರಿಸಿದರು.ಕರಾವಳಿ ಸದಾ ಕಾಲ ಶಾಂತಿಯುತವಾಗಿರಬೇಕು, ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು, ಉದ್ಯೋಗ ಸೃಷ್ಟಿಯಾಗಬೇಕೆಂದು ರಾಜ್ಯ ಸರ್ಕಾರ ಪ್ರಯತ್ನಪಡುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡಕ್ಕೆ ಇಷ್ಟಪಟ್ಟು ಜನರು ಬರುತ್ತಿದ್ದರು. ಮತ್ತೆ ಅಂತಹ ನಾಡನ್ನು ಕಟ್ಟಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು.----------
ರೌಡಿ ಶೀಟರ್ ಅಂತ ಗೊತ್ತಿರಬೇಕಿತ್ತು..ಕೊಲೆಯಾದ ಸುಹಾಸ್ ಶೆಟ್ಟಿಯು ಕೊಲೆ ಪ್ರಕರಣ ಸೇರಿದಂತೆ 5 ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿದ್ದ. ಒಂದು ಪಕ್ಷಕ್ಕೆ ಸೇರಿದವರು (ಬಿಜೆಪಿ) ರೌಡಿ ಶೀಟರ್ ಒಬ್ಬನನ್ನು ಹೀರೋ ಮಾಡಿದ್ದಾರೆ. ಹಾಗೆ ಮಾಡುವಾಗ ಆತ ರೌಡಿ ಶೀಟರ್ ಎಂಬುದು ಗೊತ್ತಿರಬೇಕಿತ್ತು. ಆದರೆ ರಾಜ್ಯ ಸರ್ಕಾರ, ನಾವು ಆ ಥರ ಮಾಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.