ಮೇ ವರೆಗೂ ಭತ್ತ ನೋಂದಣಿ ಪ್ರಕ್ರಿಯೆ ವಿಸ್ತರಿಸಿ: ಜಿಲ್ಲಾ ರೈತರ ಒಕ್ಕೂಟ

KannadaprabhaNewsNetwork | Published : May 4, 2025 1:34 AM

ಸಾರಾಂಶ

ತಕ್ಷಣ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು, ನೋಂದಣಿ ಪ್ರಕ್ರಿಯೆಯನ್ನು ಮೇ ತಿಂಗಳ ಅಂತ್ಯದ ವರೆಗೆ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಶನಿವಾರ ಜಿಲ್ಲಾ ರೈತ ಒಕ್ಕೂಟದಿಂದ ರಸ್ತೆ ತಡೆ ಮಾಡಿ ಅಲ್ಲಿಯೇ ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್‌ಗೆ ಮನವಿ ಸಲ್ಲಿಸಿದರು.

ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ । ರಸ್ತೆ ತಡೆ । ತಕ್ಷಣ ಆರಂಭಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ತಕ್ಷಣ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು, ನೋಂದಣಿ ಪ್ರಕ್ರಿಯೆಯನ್ನು ಮೇ ತಿಂಗಳ ಅಂತ್ಯದ ವರೆಗೆ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಶನಿವಾರ ಜಿಲ್ಲಾ ರೈತ ಒಕ್ಕೂಟದಿಂದ ರಸ್ತೆ ತಡೆ ಮಾಡಿ ಅಲ್ಲಿಯೇ ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಪ್ರಾರಂಭವಾಗಿದ್ದು, ದರ ಬಹಳ ಕಡಿಮೆ ಇದೆ. ಭತ್ತದ ಭತ್ತದ ದರ ಕುಸಿತದಿಂದ ರೈತರು ಚಿಂತಾಕ್ರಾಂತರಾಗಿದ್ದು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ದರ ಕುಸಿತವಾದಾಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಮಾಡಬೇಕು. ಆದರೆ ಏ.15 ರಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ ಪ್ರಭಾರ ಜಿಲ್ಲಾಧಿಕಾರಿ, ಮಾ.20 ರಿಂದ ಏ.25ರ ವರೆಗೆ ಭತ್ತ ಬೆಳೆದ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ಮೇ ತಿಂಗಳ ಅಂತ್ಯದವರೆಗೆ ಖರೀದಿ ಪ್ರಕ್ರಿಯೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ. ಜಿಲ್ಲಾಧಿಕಾರಿಯವರ ಈ ತೀರ್ಮಾನವನ್ನು ಜಿಲ್ಲಾ ರೈತರ ಒಕ್ಕೂಟ ಸ್ವಾಗತಿಸುತ್ತದೆ. ಆದರೆ ನೋಂದಾಣಿಗಾಗಿ ನೀಡಿರುವ ಕೊನೆ ದಿನ ಏ.24 ಅನ್ನು ಮೇ ತಿಂಗಳ ಅಂತ್ಯದವರೆಗೆ ಮುಂದುವರಿಸಬೇಕು ಎಂದು ಒತ್ತಾಯಿಸುತ್ತದೆ ಎಂದರು.

ಇಲ್ಲವಾದರೆ ರೈತರಿಗೆ ಅನ್ಯಾಯ-ಮೋಸ ಮಾಡಿದಂತಾಗುತ್ತದೆ. ಭತ್ತದ ಕೊಯ್ಲು ಈಗ ಪ್ರಾರಂಭವಾಗಿದ್ದು ಮಾರುಕಟ್ಟೆಗೆ ಅವಕವಾಗುತ್ತಿದೆ. ಆದರೆ ಬೆಲೆ ಕಡಿಮೆ ಇದೆ. ಖರೀದಿ ಕೇಂದ್ರದಲ್ಲಿ ನೋಂದಣಿ ದಿನಾಂಕ25.04.2025ಕ್ಕೆ ಮುಗಿದು ಹೋಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ವಂಚನೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ರೈತರ ಬೇಡಿಕೆಗಳಾದ ಇತ್ತೀಚೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಿರ್ಣಯಿಸಿದಂತೆ ತಕ್ಷಣವೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಿ, ಮೇ ತಿಂಗಳ ಅಂತ್ಯದವರೆಗೆ ಭತ್ತ ಖರೀದಿ ಪ್ರಕ್ರಿಯೆ ನಡೆಸಬೇಕು. ನೋಂದಣಿ ಪ್ರಕ್ರಿಯೆಯನ್ನು ಮೇ ತಿಂಗಳ ಅಂತ್ಯದವರೆಗೆ ವಿಸ್ತರಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಒಂದಕ್ಕೆ ಭತ್ತವನ್ನು ಕ್ವಿಂಟಾಲ್‌ಗೆ 2820 ರು.ನಂತೆ ಖರೀದಿ ಮಾಡಬೇಕು. ಒಬ್ಬ ರೈತನಿಂದ 50 ಕ್ವಿಂಟಾಲ್ ಭತ್ತ ಮಾತ್ರ ಖರೀದಿಸಬೇಕು ಎಂಬ ನಿಯಮವನ್ನು ಸಡಿಲಗೊಳಿಸಿ, ಒಬ್ಬ ರೈತನಿಂದ 200 ಕ್ವಿಂಟಾಲ್ ಭತ್ತ ಖರೀದಿಸಬೇಕು ಎಂದು ಅವತ್ತಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಮಾಜಿ ಶಾಸಕ ಎಂ.ಬಸವರಾಜನಾಯ್ಕ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ತೇಜಸ್ವಿ ಪಟೇಲ್, ಲೋಕಿಕೆರೆ ನಾಗರಾಜ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಹದಡಿ ಎಂ.ಬಿ.ಹಾಲಪ್ಪ, ಬಾತಿ ಶಿವಕುಮಾರ್, ಗೋಪನಾಳ್ ಪಾಲಕ್ಷಪ್ಪ, ಕೆಂಚವೀರಪ್ಪ, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಆರುಂಡಿ ಪುನೀತ್, ಅತ್ತಿಗೆರೆ ನಂದೀಶ್, ಗೋಣಿವಾಡ ಮಂಜುನಾಥ, ಕುರ್ಕಿ ರೇವಣಸಿದ್ದಪ್ಪ, ರಾಮಗೊಂಡನಹಳ್ಳಿ ರಾಜಶೇಖರ್, ಕುಕ್ಕುವಾಡದ ಶಂಕರ್, ಜಗದೀಶ, ಹದಡಿ ವಿಜಯ ಬಳೇಯರ, ಪ್ರಕಾಶ್, ಸಂಕೋಳ ಚಂದ್ರಶೇಖರ, ಕಳವೂರು ಮಂಜುನಾಥ, ಜಡಗನಹಳ್ಳಿ ವಿರೂಪಾಕ್ಷಪ್ಪ ಇತರರು ಭಾಗವಹಿಸಿದ್ದರು.

Share this article