ಶಿವಮೊಗ್ಗಕ್ಕೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಲು ಬಂದಿದ್ದೇನೆ. ನಾನು ಕ್ರಿಕೆಟ್ ಬ್ಯಾಟಿಂಗ್ ಚೆನ್ನಾಗಿ ಆಡುತ್ತೇನೆ. ರಾಜಕೀಯವಾಗಿ ಗೂಗ್ಲಿ ಬಾಲ್ ಹಾಕಲೇಬೇಕು, ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶಿವಮೊಗ್ಗ : ಶಿವಮೊಗ್ಗಕ್ಕೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಲು ಬಂದಿದ್ದೇನೆ. ನಾನು ಕ್ರಿಕೆಟ್ ಬ್ಯಾಟಿಂಗ್ ಚೆನ್ನಾಗಿ ಆಡುತ್ತೇನೆ. ರಾಜಕೀಯವಾಗಿ ಗೂಗ್ಲಿ ಬಾಲ್ ಹಾಕಲೇಬೇಕು, ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಕಪ್ ಬಗ್ಗೆ ನಾನು ಈಗ ಮಾತನಾಡುವುದಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಕಪ್ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನೋಡೋಣ ಇನ್ನೂ ಅದು ದೊಡ್ಡ ಮ್ಯಾಚ್ ಇದೆ. ಸಿಎಂ ಕಪ್ ರೇಸ್ನಲ್ಲಿ ನಾನಿಲ್ಲ. ಸಿಎಂ ಕಪ್ ಯಾರಿಗೆ ಕೊಡಬೇಕು, ಬಿಡಬೇಕು ಎಂಬುದು ದೆಹಲಿ ಹಾಗೂ ರಾಜ್ಯ ಮಟ್ಟದಲ್ಲಿ ಇದೆ. ಅಲ್ಲಿ ನೀವು ಕೇಳಿದರೆ ಗೊತ್ತಾಗುತ್ತದೆ ನನಗದು ಗೊತ್ತಿಲ್ಲ. ಯಾರನ್ನು ತೆಗಿಬೇಕು ಅಂತಿರಾ, ಇಡಬೇಕು ಅಂತಿರಾ ನಿರ್ಧಾರ ಅವರದ್ದು, ಬಜೆಟ್ ನಂತರ ಅಧಿಕಾರ ಬದಲಾವಣೆ ಬಗ್ಗೆ ದೆಹಲಿಯವರಿಗೆ ಕೇಳಬೇಕು. ಅಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅದು ಬಹಳ ಸಣ್ಣ ಘಟನೆ
ಬಳ್ಳಾರಿ ಘಟನೆ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಬಹಳ ಸಣ್ಣ ಘಟನೆ, ಅದಾಗಬಾರದಿತ್ತು. ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ ಎಂದರು.
ಶಿವಮೊಗ್ಗಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ ಮೂಲಕ ಬಂದಿಳಿದಾಗ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗಿದರು. ಬೆಂಬಲಿಗರ ಕೂಗೂ ಕೇಳಿದ ಸಚಿವ ಸತೀಶ್ ಜಾರಕಿಹೊಳಿ ನೀವು ಹೀಗೆ ಕೂಗೋದು ಬಿಟ್ಟರೆ ಲೀಡರ್ ಆಗ್ತಿರಾ ಎಂದು ಹೇಳಿದರು.


