ಆರೆಂಜ್ ಆರ್ಥಿಕತೆ ಬಗ್ಗೆ ಪ್ರಧಾನಿ ಈಗ ಮಾತನಾಡಿದ್ದಾರೆ‌‌. ಆದರೆ ಇದರ ಬಗ್ಗೆ ಕರ್ನಾಟಕದಲ್ಲಿ 2016ರಲ್ಲಿಯೇ ಎವಿಜಿಸಿ ನೀತಿ ತಂದು ಈ ಕ್ಷೇತ್ರದ ಬೆಳವಣಿಗೆಗೆ ಪೂರವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು : ಆರೆಂಜ್ ಆರ್ಥಿಕತೆ ಬಗ್ಗೆ ಪ್ರಧಾನಿ ಈಗ ಮಾತನಾಡಿದ್ದಾರೆ‌‌. ಆದರೆ ಇದರ ಬಗ್ಗೆ ಕರ್ನಾಟಕದಲ್ಲಿ 2016ರಲ್ಲಿಯೇ ಎವಿಜಿಸಿ ನೀತಿ ತಂದು ಈ ಕ್ಷೇತ್ರದ ಬೆಳವಣಿಗೆಗೆ ಪೂರವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಬೆಂಗಳೂರು ಜಿಎಎಫ್‌ಎಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಲ್ಲಿ ಆ್ಯನಿಮೇಷನ್‌, ವಿಷುವಲ್ಸ್‌, ಎಫೆಕ್ಟ್ಸ್‌, ಗೇಮಿಂಗ್‌, ಕಾಮಿಕ್ಸ್‌ ವಿಚಾರದಲ್ಲಿ ಇಂದು ಒಂದು ಹೊಸ ಚರಿತ್ರೆ ಆರಂಭ ಮಾಡಿದ್ದೇವೆ. ಪ್ರಧಾನಿ ಅವರು ಈಗ ಆರೆಂಜ್‌ ಎಕನಾಮಿ ಬಗ್ಗೆ ಮಾತನಾಡಿದ್ದಾರೆ. ಆದರೆ, 2016ರಲ್ಲೇ ಭಾರತದಲ್ಲಿ ಮೊದಲ ಬಾರಿಗೆ ಎವಿಜಿಸಿ(ಆ್ಯನಿಮೇಷನ್‌, ವಿಜುವಲ್‌ ಎಫೆಕ್ಸ್ಟ್‌, ಗೇಮ್ಸ್‌ಅಂಡ್‌ ಕಾಮಿಕ್ಸ್‌) ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಪ್ರಸ್ತುತ 2024–2029 ಅವಧಿಗೆ 3ನೇ ಎವಿಜಿಸಿ-ಆರ್‌ಎಕ್ಸ್‌ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.

ಅಭಿವೃದ್ಧಿಗೆ ಬಲವಾದ ಅಡಿಪಾಯ

ಕರ್ನಾಟಕವು ಈಗಾಗಲೇ ಈ ಕ್ಷೇತ್ರದ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದೆ. ಪ್ರತಿಭಾನ್ವಿತ ನವೋದ್ಯಮಗಳನ್ನು ಬಲಪಡಿಸುವುದು, ಸೃಜನಶೀಲ ನವೋದ್ಯಮಗಳನ್ನು ಬೆಂಬಲಿಸುವುದು, ಮುಂಬರುವ ಎವಿಜಿಸಿ-ಎಕ್ಸ್‌ಆರ್‌ ಪಾರ್ಕ್‌ನಂತಹ ಮೂಲಸೌಕರ್ಯವನ್ನು ವಿಸ್ತರಿಸುವುದು ಮತ್ತು ಆರೆಂಜ್ ಎಕಾನಮಿಯ ಪ್ರಮುಖ ಕೇಂದ್ರವಾಗಿ ಮತ್ತು ಸೃಜನಶೀಲ ತಂತ್ರಜ್ಞಾನಕ್ಕೆ ಜಾಗತಿಕ ಕೇಂದ್ರವಾಗಿ ಬೆಳೆಸುವುದೇ ನಮ್ಮ ಗುರಿ ಎಂದರು.

ಪ್ರತಿಭಾವಂತರಿಗೆ ಕಾಯಕ ಭೂಮಿ

ಕರ್ನಾಟಕ ರಾಜ್ಯ ಸಂಶೋಧನೆಗೆ, ನೂತನ ಆವಿಷ್ಕಾರಗಳಿಗೆ, ಉದ್ಯೋಗಗಳಿಗೆ ಹಾಗೂ ಪ್ರತಿಭಾವಂತರಿಗೆ ಕಾಯಕ ಭೂಮಿಯಾಗಿದೆ. ಕರ್ನಾಟಕವು 875ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ. ಡಿಜಿಟಲ್ ಮಾಧ್ಯಮ ಕಂಪನಿಗಳಿಗೆ ನೆಲೆಯಾಗಿ ನಮ್ಮ ರಾಜ್ಯ ರೂಪುಗೊಂಡಿದೆ ಎಂದು ಬಣ್ಣಿಸಿದರು.

ಜಿಎಎಫ್ ಎಕ್ಸ್ ಕ್ಷೇತ್ರ ವಾರ್ಷಿಕವಾಗಿ ಶೇ.25ರಿಂದ 30 ರಷ್ಟು ಬೆಳೆಯುತ್ತಿದ್ದು, ಮುಂಬರುವ ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಸಾರಥ್ಯ ವಹಿಸಿರುವುದು ಹೆಚ್ಚಿನ ಬಲ ತುಂಬಿದೆ ಎಂದರು.