ಕನ್ನಡಪ್ರಭ ವಾರ್ತೆ ಹಾಸನ
ನಗರದ ಅರಸೀಕೆರೆ ರಸ್ತೆ, ಬಿ. ಕಾಟೀಹಳ್ಳಿಯಲ್ಲಿರುವ ಉನ್ನತಿ ಶಿಕ್ಷಣ ಸಂಸ್ಥೆಯ ಎ.ಪಿ.ಜೆ ಪಿಯು ಕಾಲೇಜು ಐತಿಹಾಸಿಕ ಕೊಡುಗೆಯನ್ನು ಹಾಸನ ಜಿಲ್ಲೆಗೆ ನೀಡಿದ್ದು, ಈ ಕಾಲೇಜಿನಿಂದ ಪ್ರಪ್ರಥಮ ಬಾರಿಗೆ ೫ ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶ ಮಾಡಿರುವುದಾಗಿ ಸಂಸ್ಥೆಯ ಸಂಸ್ಥಾಪಕ ಡಿ. ಮುರುಳಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ರಾಷ್ಟ್ರಮಟ್ಟದ ಎಂಜಿನಿಯರಿಂಗ್ ವಿಭಾಗದ ಜೆಇಇ ಅಡ್ವಾನ್ಸ್ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ನಗರದ ಎ.ಪಿ.ಜೆ ಪಿಯು ಕಾಲೇಜಿನ ಐದು ಪ್ರತಿಭಾವಂತ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಗಳಿಸಿ ತಮ್ಮ ಕನಸಿನ ಐಐಟಿ ಕಾಲೇಜುಗಳಿಗೆ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯಲು ಸಿದ್ಧರಾಗಿದ್ದಾರೆ. ಮೋಹಿತ್ ಎಂ. ನಾಯಕ್ ಮತ್ತು ತನ್ಮಯಿ ಎಚ್.ಎಸ್. ರಾಷ್ಟ್ರಮಟ್ಟದ ಕೆಟಗರಿ ಶ್ರೇಣಿಯಲ್ಲಿ ಕ್ರಮವಾಗಿ ೩೭೭ ಹಾಗೂ ೩೯೦ನೇ ಸ್ಥಾನ ಗಿಟ್ಟಿಸಿದರೆ ಎಮ್.ಎನ್. ಪ್ರಶಾಂತ್ ಕುಮಾರ್ ೧೦,೦೩೭ನೇ ಸ್ಥಾನ ಪಡೆದರೆ ಪ್ರಜ್ವಲ್ ವಿ. ಜೋಯಿಸ್ ೧೨,೦೨೯ ಮತ್ತು ಮಹಮ್ಮದ್ ಯೂಸುಫ್ ೧೨,೦೭೬ ನೇ ಬ್ಯಾಂಕ್ ಪಡೆದು ರಾಷ್ಟ್ರಮಟ್ಟದ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ ಎಂದರು. ಈವರೆಗೂ ಹಾಸನ ಜಿಲ್ಲೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇವಲ ಎನ್.ಐ.ಟಿ. ಎಂಜಿನಿಯರಿಂಗ್ ಕಾಲೇಜುಗಳಿಗೆ ಮಾತ್ರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಬಾರಿ ಪ್ರಪ್ರಥಮ ಬಾರಿಗೆ ಹಾಸನ ಜಿಲ್ಲೆಯ ಈ ಐದು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯುವ ಸಾಧನೆ ಮಾಡಿರುವುದು ಇಡೀ ಹಾಸನ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಈ ವಿದ್ಯಾರ್ಥಿಗಳು ಕೆ-ಸಿಇಟಿ ಪರೀಕ್ಷೆಗಳಲ್ಲೂ ಸಾವಿರಕ್ಕೂ ಕಡಿಮೆ ಬ್ಯಾಂಕ್ ಪಡೆದಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾಲೇಜಿನಿಂದಲೇ ಸಂಪೂರ್ಣ ತರಬೇತಿ ಪಡೆದು ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆಯಲಿದ್ದಾರೆ ಎಂದು ತಿಳಿಸಿದರು. ಈ ಐದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉನ್ನತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಕೆ. ದೇವರಾಜು, ಮೋಹಿತ್ ಎಂ. ನಾಯಕ್, ತನ್ಮಯ್, ಪ್ರಶಾಂತ್ ಕುಮಾರ್, ಪ್ರಜ್ವಲ್ ಬಿ. ಜೋಯಿಸ್, ಮೊಹಮೊದ್ ಯೂಸಫ್ ಇತರರು ಉಪಸ್ಥಿತರಿದ್ದರು.