ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ನಾಮಕರಣ

KannadaprabhaNewsNetwork |  
Published : Aug 28, 2026, 02:15 AM IST
27ಕೆಕೆಆರ್8:ಕುಕನೂರಿನ ಪಟ್ಟಣದಲ್ಲಿರುವ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅನ್ನದಾನೀಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದು ನಾಮಕರಣ ಮಾಡಲಾಗುತ್ತಿದ್ದು, ಗೇಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ.  | Kannada Prabha

ಸಾರಾಂಶ

ಕಳೆದ ಕೆಲವು ತಿಂಗಳು ಹಿಂದೆ ಎಪಿಎಂಸಿಯಲ್ಲಿ ನಿರ್ಮಾಣವಾದ ಕೋಲ್ಡ್ ಸ್ಟೋರೆಜ್ ಉದ್ಘಾಟನೆ ವೇಳೆ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಸ್ಥಳೀಯರು ಅನ್ನದಾನೀಶ್ವರ ಹೆಸರು ಇಡಲು ಪ್ರಸ್ತಾಪಿಸಿದ್ದರು.

ಕುಕನೂರು: ಪಟ್ಟಣದಲ್ಲಿರುವ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅನ್ನದಾನೀಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದು ನಾಮಕರಣ ಮಾಡಲಾಗುತ್ತಿದ್ದು, ಇದರಿಂದ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

1973ರಲ್ಲಿ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಠದ ನಾಡೋಜ ಶ್ರೀಅನ್ನದಾನೀಶ್ವರ ಸ್ವಾಮೀಜಿ 19 ಎಕರೆ ಭೂಮಿ ದಾನವಾಗಿ ನೀಡಿದ್ದಾರೆ. ಅವರು ಭೂಮಿದಾನ ನೀಡಿದ ನಂತರ ಕುಕನೂರು ಪಟ್ಟಣದಲ್ಲಿ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಾಪನೆ ಮಾಡಲಾಯಿತು. ಅವರು ದಾನ ನೀಡಿದ ಸವಿನೆನಪಿಗೆ ಈ ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ಇಡಬೇಕು ಎಂದು ಬಹು ವರ್ಷಗಳಿಂದ ಸ್ಥಳೀಯ ನಾಗರಿಕರು, ಸ್ವಾಮೀಜಿಗಳ ಬೇಡಿಕೆ ಸಹ ಇತ್ತು. ಹಲವಾರು ಬಾರಿ ಜನಪ್ರತಿನಿಧಿ, ಅಧಿಕಾರಿ ವರ್ಗದವರಿಗೆ ಜನರು ಮನವಿ ಸಹ ಸಲ್ಲಿಸುತ್ತಿದ್ದರು.

ಕಳೆದ ಕೆಲವು ತಿಂಗಳು ಹಿಂದೆ ಎಪಿಎಂಸಿಯಲ್ಲಿ ನಿರ್ಮಾಣವಾದ ಕೋಲ್ಡ್ ಸ್ಟೋರೆಜ್ ಉದ್ಘಾಟನೆ ವೇಳೆ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಸ್ಥಳೀಯರು ಅನ್ನದಾನೀಶ್ವರ ಹೆಸರು ಇಡಲು ಪ್ರಸ್ತಾಪಿಸಿದ್ದರು. ಆ ಪ್ರಸ್ತಾವನೆ ಹಿನ್ನೆಲೆ ಸಚಿವ ಬಸವರಾಜ ರಾಯರಡ್ಡಿ ಸಹ ಎಪಿಎಂಸಿಗೆ ಶ್ರೀಗಳು ದಾನ ನೀಡಿದ ಭೂಮಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಪ್ರಸ್ತಾವನೆ ಸೂಕ್ತಾರ್ಹ ಎಂದು ಸಹ ಬಣ್ಣಿಸಿದ್ದರು. ಸದ್ಯ ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ಇಡಲು ಮುಂದಾಗಿದ್ದು ಸ್ಥಳೀಯ ಜನರಲ್ಲಿ ಸಂತಸ ಮೂಡಿದೆ.

ಕುಕನೂರು ಪಟ್ಟಣದಲ್ಲಿ ಮುಂಡರಗಿ ಅನ್ನದಾನೀಶ್ವರ ಮಠದ ಶಾಖಾಮಠ ಸಹ ಇದ್ದು, ಮಠಕ್ಕೆ ಒಳಪಡುವ ಆಸ್ತಿ ಇದಾಗಿತ್ತು. ಆಗ ಮುಂಡರಗಿ ಶ್ರೀಗಳು ಮಠದ ಜಾಗ ಕೃಷಿಕರಿಗೆ ವ್ಯಾಪಾರ ವಹಿವಾಟಿಗೆ ಅನುಕೂಲ ಆಗಲಿ ಎಂದು ದಾನದ ರೂಪದಲ್ಲಿ ಎಪಿಎಂಸಿ ಸ್ಥಾಪನೆಗೆ ನೀಡಿದ್ದರು.

30 ರಂದು ಉದ್ಘಾಟನೆ: ಎಪಿಎಂಸಿಗೆ ನೂತನ ನಾಮಕರಣ ಕಾರ್ಯಕ್ರಮವನ್ನು ಆ.30ರಂದು ಸಚಿವ ಬಸವರಾಜ ರಾಯರಡ್ಡಿ ಉದ್ಘಾಟಿಸಲಿದ್ದಾರೆ. ಈಗಾಗಲೇ ಎಪಿಎಂಸಿಯ ಗೇಟಿನಲ್ಲಿ ಹೆಸರು ಸಹ ಬದಲಾವಣೆ ಮಾಡಲಾಗಿದೆ. ಕಚೇರಿಯಲ್ಲೂ ಸಹ ಹೆಸರು ಬದಲಾವಣೆ ಮಾಡಲಾಗಿದೆ.

ಕುಕನೂರು ಪಟ್ಟಣದ ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ಇಡಲು ಕ್ರಮ ತೆಗೆದುಕೊಳ್ಳಲಾಗಿದೆ. ಅ.30ರಂದು ಸಚಿವ ಬಸವರಾಜ ರಾಯರಡ್ಡಿ ಅವರಿಂದ ಉದ್ಘಾಟನೆ ಜರುಗಲಿದೆ ಎಂದು ಕುಕನೂರ ಅನ್ನದಾನೀಶ್ವರ ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ ತಿಳಿಸಿದ್ದಾರೆ.

ಕುಕನೂರು ಪಟ್ಟಣದಲ್ಲಿರುವ ಎಪಿಎಂಸಿಯ ಜಾಗ ಅನ್ನದಾನೀಶ್ವರ ಮಠದ್ದು, ಆಗ ಮುಂಡರಗಿ ಶ್ರೀಗಳು ಎಪಿಎಂಸಿಗೆ ದಾನದ ರೂಪದಲ್ಲಿ 19 ಎಕರೆ ಜಾಗ ನೀಡಿದ್ದಾರೆ. ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ಇಡುತ್ತಿರುವುದು ಶ್ರೀಮಠಕ್ಕೆ ಸಂದ ಗೌರವವಾಗಿದೆ ಎಂದು ಕುಕನೂರು ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕ್ಷೇತ್ರಕ್ಕೆ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರ: ಡಾ. ನಿಂಗು ಸೊಲಗಿ
ಪು.ಬಡ್ನಿ ಗ್ರಾಮದಲ್ಲಿ ಅನೈತಿಕ ಸಂಬಂಧ: ಯುವಕನ ಕೊಲೆ