ಭಾರತ-ಅಮೇರಿಕಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಮನವಿ

KannadaprabhaNewsNetwork |  
Published : Jul 27, 2026, 03:00 AM IST
ಪೋಟೊ22ಕೆಎಸಟಿ1: ಕುಷ್ಟಗಿ ಪಟ್ಟಣದ ತಹಸೀಲ್ದಾರ ಮೂಲಕ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ರಾಷ್ಟ್ರಪತಿಗಳಿಗೆ ರೈತ ಸಂಘದವರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಅಮೆರಿಕದಂತಹ ರಾಷ್ಟ್ರಗಳು ತಮ್ಮ ರೈತರಿಗೆ ಭಾರೀ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿವೆ

ಕುಷ್ಟಗಿ: ಭಾರತ ಸರ್ಕಾರವು ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಹಿ ಹಾಕಬಾರದು.ಈ ಒಪ್ಪಂದ ಜಾರಿಯಾದರೆ ದೇಶದ ಕೃಷಿ, ಆಹಾರ ಸಾರ್ವಭೌಮತೆ ಹಾಗೂ ಕೋಟ್ಯಂತರ ರೈತರು ಮತ್ತು ಕೃಷಿ ಕಾರ್ಮಿಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ದೇಶದ ಕೃಷಿ ವ್ಯವಸ್ಥೆಯೇ ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ಸಿಲುಕುವ ಅಪಾಯವಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಆರ್.ಕೆ. ದೇಸಾಯಿ ಹೇಳಿದರು.

ಪಟ್ಟಣದ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿ, ಕೃಷಿಯೇ ಭಾರತದ ಬೆನ್ನೆಲುಬು. ಆದರೆ ಮುಕ್ತ ವ್ಯಾಪಾರ ಒಪ್ಪಂದಗಳ ಹೆಸರಿನಲ್ಲಿ ವಿದೇಶಿ ಕಂಪನಿಗಳಿಗೆ ದೇಶದ ಮಾರುಕಟ್ಟೆ ತೆರೆದರೆ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಸಾಧ್ಯವಾಗುವುದಿಲ್ಲ. ಈಗಾಗಲೇ ಸಾಲದ ಹೊರೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ಮತ್ತೊಂದು ದೊಡ್ಡ ಹೊಡೆತವಾಗಲಿದೆ ಎಂದು ಹೇಳಿದರು.

ಅಮೆರಿಕದಂತಹ ರಾಷ್ಟ್ರಗಳು ತಮ್ಮ ರೈತರಿಗೆ ಭಾರೀ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿವೆ. ಅಂತಹ ದೇಶಗಳ ಕೃಷಿ ಉತ್ಪನ್ನ ಭಾರತಕ್ಕೆ ಮುಕ್ತವಾಗಿ ಆಮದುಗೊಂಡರೆ ದೇಶೀಯ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ಇದರಿಂದ ಸಣ್ಣ ಮತ್ತು ಮಧ್ಯಮ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ನೇರ ಪರಿಣಾಮ ಉಂಟಾಗಲಿದೆ ಎಂದರು.

ಆಹಾರ ಉತ್ಪಾದನೆ ಮತ್ತು ವಿತರಣೆಯ ಮೇಲಿನ ನಿಯಂತ್ರಣ ಕ್ರಮೇಣ ಬಹುರಾಷ್ಟ್ರೀಯ ಹಾಗೂ ದೊಡ್ಡ ಕಾರ್ಪೊರೇಟ್ ಕಂಪನಿಗಳ ಕೈಗೆ ಹೋಗುವ ಅಪಾಯವಿದ್ದು, ಇದು ದೇಶದ ಆಹಾರ ಭದ್ರತೆ ಮತ್ತು ಸ್ವಾವಲಂಬನೆಗೂ ಧಕ್ಕೆಯಾಗಲಿದೆ. ರೈತರ ಹಿತಾಸಕ್ತಿಗೆ ವಿರುದ್ಧ ಯಾವುದೇ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಆಗ್ರಹಿಸಿದರು.

ರೈತರ ಅಭಿಪ್ರಾಯ ಕಡೆಗಣಿಸಿ ಯಾವುದೇ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವುದು ಸರಿಯಲ್ಲ. ರೈತ ಸಂಘಟನೆ, ಕೃಷಿ ತಜ್ಞರು ಹಾಗೂ ರಾಜ್ಯಗಳ ಅಭಿಪ್ರಾಯ ಪಡೆದು ಮಾತ್ರ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನರೇಗಾ ಯೋಜನೆ ಬದಲಿಗೆ ಈಗ ವಿಬಿಜಿರಾಮ್‌ ಜಿ ಜಾರಿಗೆ ಬಂದಿರುವ ಹಿನ್ನೆಲೆ ಗ್ರಾಪಂ ಮಟ್ಟದಲ್ಲಿರುವ ಬಡ ಕೂಲಿಕಾರರಿಗೆ ಕೆಲಸ ಕೊಟ್ಟಿಲ್ಲ ಈಗ ಬರಗಾಲ ಸೃಷ್ಟಿಯಾಗುತ್ತಿದ್ದು ಜಮೀನುಗಳಲ್ಲಿ ಕೆಲಸ ಇಲ್ಲದೆ ಪರದಾಡುವಂತಾಗಿದ್ದು ಜನಜೀವನ ಸಂಕಷ್ಟಕ್ಕೀಡಾಗಿದೆ ಆದಷ್ಟು ಶೀಘ್ರದಲ್ಲಿ ಕೂಲಿಕಾರರಿಗೆ ಕೆಲಸ ಕೊಡಬೇಕು ಎಂದು ರೈತರು ಕೂಲಿಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷೆ ಸಂಗಮ್ಮ ಗುಳಗೌಡರ, ಉಪಾಧ್ಯಕ್ಷೆ ಅಕ್ಕಮ್ಮ ಮರೆಗೌಡರ, ಕಾರ್ಯದರ್ಶಿ ಅಮರೇಗೌಡ ಪಾಟೀಲ, ಪಾರ್ವತೆಮ್ಮ ಶಿರಗುಂಪಿ, ಮಲ್ಲಿಕಾರ್ಜುನ ತಳಗೇರಿ, ಶೇಖರ ಎಲಿಗಾರ, ಹುಸೇನಸಾಬ್‌ ತಾವರಗೇರಾ ಸೇರಿದಂತೆ ಸಂಘದ ಪದಾಧಿಕಾರಿ ಹಾಗೂ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಸುವ್ಯವಸ್ಥಿತ ರಿಕ್ಷಾ ಪಾರ್ಕಿಂಗ್‌ ವ್ಯವಸ್ಥೆ: ಶಾಸಕ ಪೂಂಜ
ಜನವರಿಯಲ್ಲಿ ಆಳ್ವಾಸ್ ನುಡಿಸಿರಿ-ವಿರಾಸತ್