- ಸಂಶೋಧನೆಗೆ ಹೆಚ್ಚು ಅನುದಾನ ಬಿಡುಗಡೆಗೂ ಒತ್ತಾಯ: ಸಂಸದೆ ಡಾ.ಪ್ರಭಾ ಹೇಳಿಕೆ - ದಾಗಿನಕಟ್ಟೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಡಕೆ ಬಗ್ಗೆ ಪರಿಣಾಮಕಾರಿ ಸಂಶೋಧನೆ ಅಗತ್ಯವಿದ್ದು, ದೇಶದಲ್ಲೇ ಅತಿ ಹೆಚ್ಚು ಅಡಕೆ ಬೆಳೆಯುವ ದಾವಣಗೆರೆ ಜಿಲ್ಲೆಯಲ್ಲೇ ಅಡಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು, ಆ ಮೂಲಕ ಸಂಶೋಧನೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಅಡಕೆ ಸಂಶೋಧನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಅತ್ಯಂತ ಕಡಿಮೆ ಇದೆ. ಈ ಹಿನ್ನೆಲೆ ಹೆಚ್ಚು ಅನುದಾನ ನೀಡುವಂತೆ ಆಗ್ರಹಿಸಿದ್ದೇವೆ ಎಂದರು.
ಶ್ರೀಲಂಕಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಅಡಕೆ ಕ್ಯಾನ್ಸರ್ಕಾರಕ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಇದೇ ವಿಚಾರದ ಚರ್ಚೆ ನಡೆದಿದೆ. ಕೇವಲ ಅಡಕೆ ಸೇವಿಸುವುದರಿಂದ ಕ್ಯಾನ್ಸರ್ ಬರುವುದಿಲ್ಲ. ಅದರ ಜೊತೆಗೆ ತಂಬಾಕು ಸೇರಿಸಿ, ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಪುನಃ ಒತ್ತಿ ಒತ್ತಿ ಹೇಳುತ್ತಿದ್ದೇವೆ. ಆದರೆ, ವಿಶ್ವಸಂಸ್ಥೆ ಅಡಕೆಯನ್ನು ಪರೀಕ್ಷೆಗೊಳಪಡಿಸಿ, ಪ್ರಯೋಗಾಲಯದ ವರದಿ ನೀಡುವಂತೆ ಕೇಳುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಅಡಕೆ ದರ ಹೆಚ್ಚಾದಾಗಲೆಲ್ಲಾ ವ್ಯಾಪಾರಿಗಳು ಇಲ್ಲದ ಪುಕಾರು ಹಬ್ಬಿಸಿ, ದರ ಕುಸಿಯುವಂತೆ ಮಾಡುತ್ತಿದ್ದಾರೆ. ಶತಮಾನಗಳಿಂದಲೂ ನಮ್ಮ ದೇಶ, ಏಷ್ಯಾದ ಅನೇಕ ದೇಶಗಳಲ್ಲಿ ಜನರು ಅಡಕೆ ಬಳಸುತ್ತಾ ಬಂದಿದ್ದಾರೆ. ಈವರೆಗೆ ಅಡಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಯಾವುದೇ ಸಂಶೋಧನೆಗಳಿಂದಲೂ ದೃಢಪಡಿಸಲಾಗಿಲ್ಲ. ಹಾಗಾಗಿ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಈ ವಿಚಾರವನ್ನು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ರಿಗೆ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಶೀಘ್ರವೇ ಬಗರ್ಹುಕುಂ ಸಮಿತಿ ರಚಿಸಿ ಅರ್ಹ ಭೂ ರಹಿತರನ್ನು ಗುರುತಿಸಿ ಸಾಗುವಳಿ ಪತ್ರ ವಿತರಣೆ ಮಾಡಲಾಗುವುದು. ಸಾಗುವಳಿ ಪತ್ರಗಳನ್ನು ಕೊಡಿಸುವುದಾಗಿ ಕೆಲವು ಏಜೆಂಟರು ಬಡ ರೈತರಿಂದ ₹2ರಿಂದ ₹5 ಲಕ್ಷವರೆಗೆ ಹಣ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ಯಾರೂ ಅಂತಹ ಏಜೆಂಟರುಗಳಿಗೆ ಹಣ ನೀಡಬಾರದು ಎಂದು ಹೇಳಿದರು.
- - -
ಸಂಶೋಧನಾ ವರದಿ 7 ವರ್ಷವಾದರೂ ನೀಡಿಲ್ಲ ಜಾಗತಿಕ ಮಟ್ಟದಲ್ಲಿ ಅಡಕೆಗೆ ಹೋದ ಮಾನ ಮತ್ತೆ ತಂದು ಕೊಡಲು ಅಡಕೆ ಮೇಲೆ ಹೆಚ್ಚು ಹೆಚ್ಚು ಸಂಶೋಧನೆ ಆಗಬೇಕು. ಸಂಶೋಧನೆ ಕೈಗೊಳ್ಳಲು ಹೆಚ್ಚು ಹೆಚ್ಚು ಅನುದಾನವೂ ಬೇಕು. ಈ ಹಿಂದಿನ ಸಂಶೋಧನಾ ವರದಿ 7 ವರ್ಷವಾದರೂ ಇನ್ನೂ ನೀಡಲು ಸಾಧ್ಯವಾಗಿಲ್ಲ. ಈಗ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಶೀಘ್ರವೇ ವರದಿ ನೀಡಿದರೆ ಕ್ಯಾನ್ಸರ್ಕಾರಕ ಎಂಬ ಅಭಿಪ್ರಾಯ ತಪ್ಪಿಸಿ, ಅಡಕೆ ಜೊತೆ ತಂಬಾಕು ಸೇವಿಸಿದರೆ ಮಾತ್ರ ಕ್ಯಾನ್ಸರ್ಗೆ ಕಾರಣ ಎಂಬುದನ್ನು ದೃಢಪಡಿಸಿದರೆ ಅಡಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತದೆ. - ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.
-10ಕೆಡಿವಿಜಿ4.ಜೆಪಿಜಿ:
ದಾಗಿನಕಟ್ಟೆಯಲ್ಲಿ ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು. -10ಕೆಡಿವಿಜಿ5.ಜೆಪಿಜಿ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆಯಲ್ಲಿ ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶಂಕುಸ್ಥಾಪನೆ ನೆರವೇರಿಸಿದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಜೆ.ಆರ್.ಷಣ್ಮುಖಪ್ಪ, ತೇಜಸ್ವಿ ವಿ.ಪಟೇಲ್ ಇತರರು ಇದ್ದರು.