ರೋಣ: ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು, ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರೋಣ ತಾಲೂಕು ಘಟಕ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಎ.ಎಸ್. ಖತೀಬ ಮಾತನಾಡಿ, ರಾಷ್ಟ್ರಾದ್ಯಂತ 20 ಕೋಟಿಗೂ ಅಧಿಕ ಹಿರಿಯ ನಾಗರಿಕರಿದ್ದು, ಅವರೆಲ್ಲರನ್ನು ರಾಷ್ಟ್ರದ ಸಂಪತ್ತು ಎಂದು ಪರಿಗಣಿಸಬೇಕು. ಆರ್ಥಿಕವಾಗಿ ದುರ್ಬಲರಾಗಿರುವ ಎಲ್ಲ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹ 10 ಸಾವಿರ ಮಾಸಿಕ ವೇತನ ನೀಡಬೇಕು, ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ ತೆರೆಯಬೇಕು. ಈಗಾಗಲೇ ನಿಲ್ಲಿಸಿರುವ ರೈಲ್ವೆ ಪ್ರಯಾಣ ರಿಯಾಯಿತಿಯನ್ನು ಪುನಃ ನೀಡಬೇಕು. ಆಯುಷ್ಮಾನ್ ಆರೋಗ್ಯ ಕಾರ್ಡ್ನ್ನು ಹಿರಿಯ ನಾಗರಿಕರಿಗಾಗಿ ಸಕ್ರಿಯಗೊಳಿಸಬೇಕು. ರಾಜ್ಯ ಸರ್ಕಾರ ಕಾನೂನಿನಲ್ಲಿ ಇರುವಂತೆ ಪ್ರತಿ ಪೊಲೀಸ್ ಠಾಣೆಯಲ್ಲಿ ಸಮಿತಿ ರಚಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಲ್ ಮತ್ತು ಚಿಕಿತ್ಸಾ ವಿಭಾಗ ತೆರೆಯಬೇಕು ಎಂದು ಆಗ್ರಹಿಸಿದರು.ರಾಜ್ಯದ ಸಾರಿಗೆ ಬಸ್ಗಳಲ್ಲಿ ಹಿರಿಯ ನಾಯಕರಿಕರಿಗೆ ಉಚಿತ ಪ್ರಯಾಣ ಕಲ್ಪಿಸಬೇಕು. ವೃದ್ಧಾಪ್ಯ ವೇತನದ ವಾರ್ಷಿಕ ಆದಾಯದ ಮಿತಿಯನ್ನು ₹ 33000ದಿಂದ ₹ 1 ಲಕ್ಷ 20 ಸಾವಿರಕ್ಕೆ ಹೆಚ್ಚಿಸಬೇಕು. ನಿವೃತ್ತ ನೌಕರರ 7ನೇ ವೇತನ ಆಯೋಗದ 2ನೇ ಭಾಗವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಈ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗದ ಕಾರಣ ಮತ್ತು ಸರ್ಕಾರದ ಬಜೆಟ್ಟಿನಲ್ಲಿ ಈ ಬೇಡಿಕೆಗಳನ್ನು ಪರಿಗಣಿಸದ ಕಾರಣ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮುಂದುವರಿಯುವುದು ಎಂದರು.
ಉಪ ತಹಸೀಲ್ದಾರ್ ನೀಲೋಗಲ್ಲ ಮನವಿ ಸ್ವೀಕರಿಸಿದರು. ಸಂಘದ ಪದಾಧಿಕಾರಿಗಳಾದ ಎಸ್.ಎಲ್. ಹಂಚಿನಾಳ, ಆರ್.ವೈ. ಮುರಕಿ, ಎಂ. ಎಸ್. ಶೀಲವಂತರ, ಎ.ಎಂ., ಹೊಸಮನಿ, ಮಹಾದೇವಪ್ಪ ಹಾದಿಮನಿ, ಬಿ.ಎಚ್. ನಾಯಕ, ಎಂ.ಕೆ. ಹೊರಪೇಟಿ, ಎಂ.ಎಂ. ಮುಲ್ಲಾ, ಕೆ.ಎಸ್. ಸವದತ್ತಿ, ಜೆ.ಬಿ. ಕಲ್ಲನಗೌಡ್ರ, ಕೆ.ಎಸ್. ಬಾರಕೇರ, ಎಂ.ಎಚ್. ಓಲೇಕಾರ ಇದ್ದರು.