ಕನ್ನಡಪ್ರಭ ವಾರ್ತೆ ಮಂಡ್ಯ ಮಂಡ್ಯದ ಕೆರೆಯಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗಾಗಿ ನಿರ್ಮಿಸಿರುವ ಮನೆಗಳಿಗೆ ಏಕಾಏಕಿ ಅನ್ಯ ಧರ್ಮೀಯರು ಅತಿಕ್ರಮ ಪ್ರವೇಶ ಮಾಡಿರುವ ಘಟನೆ ಬುಧವಾರ ನಡೆಯಿತು. ಇದರಿಂದ ಸ್ಥಳದಲ್ಲಿ ಬಿದುವಿನ ವಾತಾವರಣ ಮತ್ತು ಪ್ರಕ್ಷುಬ್ದ ಸ್ಥಿತಿ ನಿರ್ಮಾಣಗೊಂಡಿತ್ತು.ಸ್ಥಳಕ್ಕೆ ಆಗಮಿಸಿದ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹಾಗೂ ಡಿವೈಎಸ್ಪಿ ಲಕ್ಷ್ಮೀನಾರಾಯಣ ಅತಿಕ್ರಮವಾಗಿ ಪ್ರವೇಶಿಸಿದ್ದ ಜನರೊಂದಿಗೆ ನಡೆಸಿದ ಸಂಧಾನ ಯಶಸ್ವಿಯಾಗಿ ಪರಿಸ್ಥಿತಿ ತಿಳಿಗೊಂಡಿತು.ಮಂಡ್ಯದ ಕೆರೆ ಅಂಗಳದ ನಿರ್ಮಿತಿ ಕೇಂದ್ರದ ಪಕ್ಕದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ಕೊಳಗೇರಿ ಮಂಡಳಿ ಹಲವು ವರ್ಷಗಳ ಹಿಂದೆಯೇ ವಸತಿಯನ್ನು ನಿರ್ಮಿಸಿದೆ. ಸುಮಾರು 576 ಮನೆಗಳಿರುವ ವಸತಿ ಸಂಕೀರ್ಣಕ್ಕೆ ತೆರಳಲು ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ನಿವಾಸಿಗಳು ಒಪ್ಪುತ್ತಿಲ್ಲ. ಆಸ್ಪತ್ರೆ ಜಾಗದಲ್ಲೇ ನಮಗೆ ಮನೆ ನಿರ್ಮಿಸಿ ಕೊಡಬೇಕೆಂಬ ಬಿಗಿಪಟ್ಟಿನೊಂದಿಗೆ ಹಠ ಹಿಡಿದು ಕುಳಿತಿದ್ದಾರೆ.ಆಸ್ಪತ್ರೆ ಜಾಗದಿಂದ ತಮಿಳು ಕಾಲೋನಿ ನಿವಾಸಿಗಳನ್ನು ತೆರವು ಮಾಡುವಂತೆ ಹೈಕೋರ್ಟ್ ಕೂಡ ಆದೇಶಿಸಿತ್ತು. ಹೈಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ತಮಿಳು ಕಾಲೋನಿಯ ಸರ್ವೆ ನಡೆಸಲು ಮುಂದಾಗಿದ್ದರು. ನಿವಾಸಿಗಳು ಅದಕ್ಕೆ ಅಡ್ಡಿಪಡಿಸಿದ್ದರು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಇದೆ ಎಂಬ ನೆಪವೋಡ್ಡಿ ಆಸ್ಪತ್ರೆ ಜಾಗದಲ್ಲಿ ಉಳಿದುಕೊಂಡಿದ್ದಾರೆ. ಈ ನಡುವೆ ನಗರದ ವಿವಿಧೆಡೆಯಿಂದ ಆಗಮಿಸಿರುವ ನೂರಾರು ಕುಟುಂಬಗಳು ಮನೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಮನೆಗಳ ಬೀಗ ಒಡೆದು ಒಳಗೆ ಪ್ರವೇಶಿಸಿ ಆಕ್ರಮಿಸಿಕೊಂಡಿರುವ ಜನರು ಈ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.ಆಧಾರ್ ಕಾರ್ಡ್ ಕೈಯಲ್ಲಿ ಹಿಡಿದು ಮನೆ ಮುಂದೆ ನಿಂತಿರುವ ಜನರು ತಮಿಳು ಕಾಲೋನಿ ನಿವಾಸಿಗಳು ಇಲ್ಲಿಗೆ ಬರದಿದ್ದ ಮೇಲೆ ಈ ಮನೆಗಳನ್ನು ಕಾಲಿ ಉಳಿಸುವ ಅವಶ್ಯಕತೆ ಇಲ್ಲ. ಅವರಿಗೆ ಬೇರೆ ಎಲ್ಲಾದರೂ ನೆಲೆ ಕಲ್ಪಿಸಿ ನಮಗೆ ಈ ಜಾಗದಲ್ಲಿ ಕಟ್ಟಿರುವ ಮನೆಗಳನ್ನು ದೊರಕಿಸಿ ಕೊಡುವಂತೆ ಮಕ್ಕಳು, ವೃದ್ಧರ ಸಹಿತ ಮನೆಗಳನ್ನು ಆಕ್ರಮಿಸಿಕೊಂಡಿರುವ ಅನ್ಯ ಧರ್ಮೀಯರು ಅಧಿಕಾರಿಗಳನ್ನು ಒತ್ತಾಯಿಸಿದರು.ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿರುವ ಮನೆಗಳಿಗೆ ಅನ್ಯಧರ್ಮೀಯರು ಅತಿಕ್ರಮ ಮಾಡಿರುವ ವಿಷಯ ತಿಳಿದು ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮನೆಗಳನ್ನು ಅತಿಕ್ರಮವಾಗಿ ಪ್ರವೇಶಿಸಿದ್ದ ಜನರೊಂದಿಗೆ ಮಾತುಕತೆ ನಡೆಸಿದರು. ಸರ್ಕಾರ ಕೋಟ್ಯಾಂತರ ರು ಖರ್ಚು ಮಾಡಿ ತಮಿಳು ಕಾಲೋನಿ ನಿವಾಸಿಗಳಿಗೆ ಮನೆ ಕಟ್ಟಿಕೊಟ್ಟಿದೆ. ಅವರನ್ನು ಮನೆಗಳಿಗೆ ತೆರಳುವಂತೆ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅವರಿಗಾಗಿ ನಿರ್ಮಿಸಿರುವ ಮನೆಗಳಿಗೆ ಅತಿಕ್ರಮ ಪ್ರವೇಶ ಮಾಡಿರುವುದು ಕಾನೂನುಬಾಹಿರ. ನಗರ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರನ್ನು ಗುರುತಿಸಿ ಅವರಿಗೂ ಸೂರು ಕಲ್ಪಿಸಿಕೊಡಲಾಗುವುದು. ಅಲ್ಲಿಯವರೆಗೂ ತಾಳ್ಮೆಯಿಂದ ಇದ್ದು ಈಗ ಮನೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.ಬಾಕ್ಸ್ಕೊನೆಗೂ ಸಂಧಾನ ಸಫಲಹಂಚಿಕೆಯಾಗದ ಮನೆಗಳಿಗೆ ಅಕ್ರಮ ಪ್ರವೇಶ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿತು. ಸಂಧಾನದ ಬಳಿಕ ಮಾಧ್ಯಮಗಳಿಗೆ ಮಂಡ್ಯ ಉಪಯೋಗಕಾರಿ ಎಂ.ಶಿವಮೂರ್ತಿ ಮಾತನಾಡಿ, ಕೆಲವೊಂದು ತಪ್ಪು ಮಾಹಿತಿ, ಮನೆ ಹಂಚಿಕೆಯಾಗುತ್ತಿರುವ ವದಂತಿಯನ್ನು ನಂಬಿ ಏಕಾಏಕಿ ಇಲ್ಲಿಗೆ ಬಂದಿದ್ದಾರೆ. ನಮಗೂ ಮನೆ ಇಲ್ಲ ಕೊಡಿ ಅನ್ನೋದು ಅವರ ಬೇಡಿಕೆ. ಸದ್ಯ ಎಲ್ಲರ ಮನವೊಲಿಸಿದ್ದೇವೆ. ಎಲ್ಲರೂ ಒಪ್ಪಿದ್ದಾರೆ. ಮನೆಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಮುಂದಿನ 10 ದಿನಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು. ಸ್ಥಳೀಯ ಶಾಸಕರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
------------18ಕೆಎಂಎನ್ ಡಿ27,28,29,30
ಮಂಡ್ಯದ ಕೆರೆಯಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ನಿರ್ಮಿಸಿರುವ ಮನೆಗಳಿಗೆ ಏಕಾಏಕಿ ಅನ್ಯ ಧರ್ಮೀಯರು ಅತಿಕ್ರಮ ಪ್ರವೇಶ ಮಾಡಿರುವುದು.ಪೋಟೋ
ತೆರವುಗೊಳಿಸುವಂತೆ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಸಂಧಾನ ಮಾಡುತ್ತಿರುವುದು.