ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಾನವನ ಬದುಕು ವಿಶ್ವ ಮಾನ್ಯವಾಗಲು ಅವಕಾಶಗಳು ಬೇಕು ಅದನ್ನು ಸಂವಿಧಾನ ಮಾಡಿ ಕೊಟ್ಟಿದೆ ಎಂದು ಹೈಕೋರ್ಟಿನ ನಿವೃತ್ತ ನ್ಯಾಯಧೀಶರ ಎಚ್.ಬಿಲ್ಲಪ್ಪ ತಿಳಿಸಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಏರ್ಪಡಿಸಲಾಗಿದ್ದ ಮುಕ್ತ ವೈಚಾರಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ವೇದಿಕೆ ಈ ನೆಲದ ಸಾಹಿತ್ಯ, ಕಲೆ, ಸಂಸ್ಕೃತಿ, ಸಾಂಸ್ಕ್ರತಿಕ ಸಂಪತ್ತನ್ನು ಉಳಿಸಿ ಬೆಳೆಸಲು ಶ್ರಮಿಸಲಿ ಅವಕಾಶ ವಂಚಿತರಿಗೆ ಅವಕಾಶಗಳನ್ನು ಮಾಡಿಕೊಟ್ಟು ಅವರ ಪ್ರತಿಭೆ ಬೆಳಗುವಂತ ವೇದಿಕೆ ಇದಾಗಲಿ ಎಂದು ಆಶಿಸಿದರು.
ಹಿರಿಯ ಸಾಹಿತಿ ಪಿ.ಎಲ್.ಲೋಕೇಶ್ವರ್ ಮಾತನಾಡಿ, ವೈಚಾರಿಕತೆ ಎಂಬುದು ಬಹಳ ವಿಶಾಲ ಅಥ೯ ಕೊಡುವಂತದ್ದು ಪ್ರತಿ ವಿಷಯದಲ್ಲು ವಿಮರ್ಶೆ ಮತ್ತು ಪರಾಮರ್ಶೆ ನಡೆಯುತ್ತದೆ ಮೌಢ್ಯ, ಕಂದಚಾರಗಳನ್ನು ಒಪ್ಪಿಕೊಳ್ಳದೆ ವೈಚಾರಿಕವಾಗಿ ನೋಡುವಂತಾಗಲಿ ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಆರ್.ಶಾಂತಪ್ಪ ಮಾತನಾಡಿ, ಸಾಹಿತ್ಯ ಪರಿಷತ್ತು ಜೊತೆ ಜೊತೆಗೆ ಅನೇಕ ಸ್ಥಳೀಯ ಸಂಸ್ಥೆ ಗಳು ಇದ್ದು ಎಲ್ಲರೂ ಒಂದಾಗಿ ಕನ್ನಡದ ತೇರು ಎಳೆಯೋಣ ನಾವು ಸದಾ ಸ್ಪಂದಿಸುತ್ತೇವೆ ಎಂದುತಿಳಿಸಿದರು.
ಮುಕ್ತ ವೈಚಾರಿಕ ವೇದಿಕೆಯ ಆಯೋಜಕಿ ಎಂ.ಆರ್.ನಳಿನ ವಾಸ್ತವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಾ.ಮೈಲಾರಪ್ಪ, ಸಾಹಿತಿಗಳಾದ ರಮೇಶ್ ಮತ್ತೋಡು ನಿಸಾರ್ ಅಹಮದ್, ಡಿ.ಟಿ.ಚಂದ್ರಶೇಖರ್, ಸುಮತಿ ಕುಮಾರ್ , ಕಾಚಪುರ ರಂಗಪ್ಪ ಪಿಲಾಪುರ ಕಂಟೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.