ಹಾವೇರಿ: ಎಲ್ಲ ಹಿರಿಯ ನಾಗರಿಕರು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು. ಆರ್ಥಿಕವಾಗಿ ದುರ್ಬಲರಾದ ಹಿರಿಯ ನಾಗರಿಕರಿಗೆ ಮಾಸಿಕ ವೃದ್ಧಾಪ್ಯ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಡಳಿತದ ಎದುರು ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ, ಸಚಿವರನ್ನು ನೇಮಿಸಬೇಕು. ತಡೆಹಿಡಿದ ಹಿರಿಯ ನಾಗರಿಕರ ರೈಲ್ವೆ ಪ್ರಯಾಣ ರಿಯಾಯಿತಿಯನ್ನು ತಕ್ಷಣ ಆರಂಭಿಸಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರ ಸಮಿತಿ ರಚಿಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಾಲು, ಚಿಕಿತ್ಸಾ ವಿಭಾಗ ಆರಂಭಿಸಿ ಎಂದು ಒತ್ತಾಯಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ಬೆಳವಡಿ ಮಾತನಾಡಿ, ರಾಜ್ಯದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ, ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಕಾರ್ಡ್ ನಿಷ್ಟ್ರಿಯವಾಗಿವೆ. ಅವುಗಳನ್ನು ಮರು ಆರಂಭಿಸಬೇಕು. ಹಿರಿಯ ನಾಗರಿಕರ ಮಾಸಿಕ ವೃದ್ಧಾಪ್ಯ ವೇತನದ ಆದಾಯ ಮಿತಿಯನ್ನು ಹೆಚ್ಚಿಸಬೇಕು. ನಿವೃತ್ತ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿಯ 2ನೇ ಭಾಗವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದರು.ಸಂಘಟನೆಯ ಕಾರ್ಯದರ್ಶಿ ನಾಗರಾಜ ಇಚ್ಚಂಗಿ, ಉಪಾಧ್ಯಕ್ಷ ಶಿವಬಸಪ್ಪ ಗೋವಿ ಮಾತನಾಡಿದರು. ಸಂಘಟನೆಯ ಗೌರವಾಧ್ಯಕ್ಷ ಎಸ್.ಎಲ್. ಕಾಡದೇವರಮಠ, ಚಂದ್ರಶೇಖರ ಮಾಳಗಿ, ಎನ್.ಬಿ. ಕಾಳೆ, ಜಿ.ಕೆ. ಹಿತ್ತಲಮನಿ, ಸಿದ್ದರಾಜ ಕಲಕೋಟಿ, ಬಿ.ಸಿ. ಹಿರೇಮಠ, ಸುರೇಶ ಕಾಳೆ, ಹನುಮಂತಗೌಡ ಗೊಲ್ಲರ, ಅಮೃತಮ್ಮ ಶೀಲವಂತರ, ದಾಕ್ಷಾಯಣಿ ಗಾಣಗೇರ, ಅಕ್ಕಮಹಾದೇವಿ ಹಾನಗಲ್ಲ, ರಾಜೇಂದ್ರ ಹೆಗಡೆ, ಮರ್ದಾನಸಾಬ ಕೋಟಣ್ಣನವರ, ಎಸ್.ಎನ್. ಕಾಳಿ, ವಿ.ಎನ್. ಪಾಟೀಲ ಮತ್ತಿತರರು ಇದ್ದರು.ನರೇಗಾ ಯೋಜನೆಯಡಿ ನಿರ್ಮಿಸಿದ ಅಡುಗೆ ಕೋಣೆ ಉದ್ಘಾಟನೆ