ಗದಗ: ಗದುಗಿನ ಹೊರವಲಯದಲ್ಲಿರುವ ರೈಲ್ವೆ ಬೈಪಾಸ್ ನಿಲ್ದಾಣದಲ್ಲಿ ಸಕಲ ಮೂಲ ಸೌಲಭ್ಯ ಆದ ನಂತರ ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಸಂಸದ ಬಸವರಾಜ ಬೊಮ್ಮಾಯಿ ಅವರ ಮೂಲಕ ರೈಲ್ವೆ ಸಚಿವ ಅಶ್ವಿನ್ ವೈಷ್ಣನ್ ಅವರಿಗೆ ಮನವಿ ಸಲ್ಲಿಸಲಾಯಿತು.ಮಂಗಳವಾರ ಗದುಗಿಗೆ ಆಗಮಿಸಿದ್ದ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅಸೋಸಿಯೇಶನ್ ಅಧ್ಯಕ್ಷ ಸುರೇಶ ಬನಸಾಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು, ಮಕ್ಕಳು ರೈಲು ಪ್ರವಾಸ ಕೈಗೊಂಡು ಗದುಗಿನ ಈ ರೈಲ್ವೆ ಬೈಪಾಸ್ ಸ್ಟೇಷನ್ನಲ್ಲಿ ಇಳಿಯುವದು, ಹತ್ತುವುದಕ್ಕೆ ತೀವ್ರ ತೊಂದರೆ ಸಂಕಷ್ಟ ಅನುಭವಿಸಬೇಕಿದೆ. ಬೈಪಾಸ್ ನಿಲ್ದಾಣದಲ್ಲಿ ಭದ್ರತೆ ಇಲ್ಲ. ಪೊಲೀಸ್ ಉಸ್ತುವಾರಿ ಇಲ್ಲ, ಬೈಪಾಸ್ ನಿಲ್ದಾಣದಿಂದ ಮಧ್ಯರಾತ್ರಿ ಗದಗ ಸಿಟಿಗೆ ಬರಲು ಹೋಗಲು ಬಸ್, ಅಟೋ, ಟಂಟಂ ಸಂಚಾರ ಇಲ್ಲ. ಗದಗ- ಸೊಲ್ಲಾಪುರ ಮಾರ್ಗವಾಗಿ ಮುಂಬೈಗೆ ವ್ಯಾಪಾರಸ್ಥರು ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಸಂಚರಿಸುವುದರಿಂದ ವಂದೇ ಭಾರತ ರೈಲು ಸಂಚಾರ ಶೀಘ್ರದಲ್ಲಿ ಆರಂಭಿಸಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಗದಗ: ಇತ್ತೀಚೆಗೆ ನಗರದ ಕೆ.ಎಚ್. ಪಾಟೀಲ್ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರೋಣ ತಾಲೂಕು ಎಕ್ಸೈಸ್ ಸಬ್ ಇನ್ಸ್ಪೆಕ್ಟರ್ ಜಗದೀಶಚಂದ್ರ ಆಲದಕಟ್ಟಿ ಅವರು 108 ಕೆಜಿ ವಿಭಾಗದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರನ್ನು ಅಬಕಾರಿ ಇಲಾಖೆಯ ಅಬಕಾರಿ ಉಪಯುಕ್ತರು, ಅಧೀಕ್ಷಕರು, ಇಲಾಖೆ ಅಧಿಕಾರಿಗಳು ಅಭಿನಂದಿಸಿದ್ದಾರೆ.