ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಹಾಯಕ ಕೃಷಿ ನಿರ್ದೇಶಕ ಡಾ.ಜೆ.ಅಶೋಕ್ ಮಾತನಾಡಿ, ರೈತರು ಬೆಳೆನಷ್ಟ ಪರಿಹಾರ ಬಗ್ಗೆ ಮನವಿ ಮಾಡುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೇ ಖಾಸಗಿ ಇನ್ಯೂರೆನ್ಸ್ ಕಂಪನಿ, ರೈತಸಂಘ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮಧ್ಯಂತರ ಪರಿಹಾರ ನೀಡುವ ಕುರಿತು ಸಮೀಕ್ಷೆ ನಡೆಸಲು ಉದ್ದೇಶಿಸಿದೆ, ಈಗಾಗಲೇ ಖಾಸಗಿ ಕಂಪನಿಗಳಿಗೆ ವಿಮೆ ಹಣಪಾವತಿ ಮಾಡಿದ ರೈತರಿಗೆ ಕಂಪನಿ ನಿಯಮದಡಿ ಪರಿಹಾರ ದೊರೆಯುತ್ತದೆ. ತಾಲೂಕಿನಲ್ಲಿ ಈಗಾಗಲೇ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಬೆಳೆ ಸಂಪೂರ್ಣ ನೆಲಕಚ್ಚಿವೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ, ಸರ್ಕಾರ ಈ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದರೆ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವೆಂದರು.
ಲೀಡ್ ಬ್ಯಾಂಕ್ ಮಾರ್ಗಸೂಚಿ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರದಿಂದ ರೈತರಿಗೆ ಬಂದ ಪರಿಹಾರದ ಹಣವನ್ನು ರೈತರ ಸಾಲವಿದ್ದಲ್ಲಿ ಸಾಲಕ್ಕೆ ಜಮಾಮಾಡಿಕೊಳ್ಳದಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ರೈತರ ಬೆಳೆವಿಮೆ, ಬೆಳೆನಷ್ಟ ಕುರಿತಂತೆ ಸರ್ಕಾರದಿಂದ ಯಾವುದೇ ಸೂಚನೆ ಬಂದರೂ ಬ್ಯಾಂಕ್ ಪಾಲಿಸುತ್ತದೆ ಎಂದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ತಾಲೂಕಿನಾದ್ಯಂತ ನೂರಾರು ಸಂಖ್ಯೆಯಲ್ಲಿ ರೈತರು ತಮ್ಮ ಹೊಲದಲ್ಲಿ ಶೇಂಗಾ ಬೆಳೆ ವಿಫಲವಾಗಿರುವುದನ್ನು ಎಲ್ಲರಿಗೂ ತೋರಿಸಲು ಶೇಂಗಾ ಬಳ್ಳಿಯನ್ನು ತಂದಿದ್ದಾರೆ. ಒಂದು ಬಳ್ಳಿಯಲ್ಲಿ ಎರಡ್ಮೂರು ಎಳೆಕಾಯಿ ಮಾತ್ರವಿದೆ. ರೈತರು ಏನೂ ಮಾಡದ ಸ್ಥಿತಿ ತಲುಪಿದ್ದಾರೆ. ಸರ್ಕಾರ ಬರಗಾಲವೆಂದು ಘೋಷಿಸಿ ಮಧ್ಯಂತರ ಪರಿಹಾರ ನೀಡಿದರೆ ಮಾತ್ರ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯ. ಅಧಿಕಾರಿಗಳು ಕೇವಲ ಕಾನೂನನ್ನು ಹೇಳಿ ರೈತರನ್ನು ಸಮದಾನ ಪಡಿಸಿದರೆ ಸಾಲದು. ಮಧ್ಯಂತರ ಪರಿಹಾರ ಹೆಕ್ಟೇರ್ಗೆ ಕನಿಷ್ಠ 25 ಸಾವಿರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಧನಂಜಯ, ವಿ.ಶ್ರೀನಿವಾಸ್, ಡಿ.ಗುರುಮೂರ್ತಿ, ಕೆ.ಶಿವಣ್ಣ, ಎ.ರಾಜಣ್ಣ, ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಎಚ್.ರಾಮಚಂದ್ರಪ್ಪ, ರುದ್ರಪ್ಪ, ಶಿವಕುಮಾರ್, ತೋಟಗಾರಿಕೆ ಅಧಿಕಾರಿ ಕುಮಾರ್, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.