ಹಾವೇರಿ: ನೂತನವಾಗಿ ಆರಂಭವಾದ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಹಾವೇರಿ ವಿವಿ ಅಡಿಯಲ್ಲಿರುವ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಸದಸ್ಯರು, ಡೀನ್ ಸದಸ್ಯರು, ಬಿಒಎಸ್, ಬಿಒಇ ಸದಸ್ಯರು, ಎಲ್ಲ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ಪರವಾಗಿ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕಳೆದ ಎರಡು ವರ್ಷಗಳ ಹಿಂದೆ ಆರಂಭವಾಗಿದ್ದ ಹಾವೇರಿ ವಿಶ್ವವಿದ್ಯಾಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸುತ್ತಿದೆ. ಕಾಲ ಕಾಲಕ್ಕೆ ಸರಿಯಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ಸಕಾಲದಲ್ಲಿ ಫಲಿತಾಂಶ ಪ್ರಕಟಿಸುತ್ತಿದೆ.
ರಾಣಿಬೆನ್ನೂರು: ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ ಸಿ.ವಿ. ರಾಮನ್ ಸಾಧನೆಯ ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ.ಪಿ. ಶಿಡೇನೂರ ಹೇಳಿದರು.ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17ರಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವೈಜ್ಞಾನಿಕ ಚಿಂತನೆಗಳು ಮಕ್ಕಳಲ್ಲಿ ಸಂಶೋಧನೆಯ ಪ್ರವೃತ್ತಿಯನ್ನು ಹುಟ್ಟು ಹಾಕುತ್ತವೆ ಎಂದರು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಪೂರ್ಣಿಮಾ ನೆಗಳೂರುಮಠ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜ್ವಾಲಾಮುಖಿ ಸ್ಫೋಟ, ಶಾಖೋತ್ಪನ್ನದ ಪರಿಣಾಮ, ವಿದ್ಯುತ್ಕೋಶದ ಮೂಲಕ ವಿದ್ಯುತ್ ಪ್ರವಾಹ ಮುಂತಾದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.
ಆರ್.ಬಿ. ಚಲವಾದಿ, ವನಜಾಕ್ಷಿ ಪಾಟೀಲ, ಪ್ರತಿಭಾ ಮೈಲಾರಕಳ್ಳಿಮಠ, ಕೆ.ಎಸ್. ಮ್ಯಾಗೇರಿ, ಶ್ವೇತಾ ಎಚ್.ವಿ. ಮತ್ತಿತರರಿದ್ದರು.