ನರಗುಂದ: ವಿದ್ಯಾರ್ಥಿಗಳಿಗೆ ಜೀವನಶೈಲಿ, ಶಿಕ್ಷಣದ ಹಸಿವು ಮತ್ತು ಶಿಸ್ತು ಬಹಳ ಮುಖ್ಯ. ಇವೆಲ್ಲವುಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡರೆ ಯಶಸ್ಸು ಖಚಿತ ಎಂದು ಚೋಟಾ ಚಾಂಪ್ಸ್ ಶಾಲೆಯ ಅಧ್ಯಕ್ಷ ಸುಭಾಷಚಂದ್ರ ಕೋತಿನ ಹೇಳಿದರು.ಅವರು ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ಸುಕೃತಿ ಚೋಟಾ ಚಾಂಪ್ಸ್ ಇಂಟರ್ ನ್ಯಾಶನಲ್ ಶಾಲೆಯ 8ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯದ ಶಿಕ್ಷಣ ನೀಡುತ್ತಿರುವ ನಮ್ಮ ಸಂಸ್ಥೆಗೆ ಪಾಲಕರ ಸಹಕಾರ ನಿರಂತರವಾಗಿರಬೇಕು ಎಂದರು.
ಸಿದ್ಧೇಶ್ವರ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ. ಎಸ್ .ಅಣ್ಣಿಗೇರಿ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ವಿದ್ಯಾಸಂಸ್ಥೆಯ ಜವಾಬ್ದಾರಿ ಎಷ್ಟಿದಿಯೋ ಅಷ್ಟೇ ಜವಾಬ್ದಾರಿ ಪ್ರತಿ ತಂದೆ ತಾಯಿಯದಾಗಿರುತ್ತದೆ ಎಂದರು.
ತಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುತ್ತಾ ರೈತ ಕುಟುಂಬದಿಂದ ಬಂದ ನಾವು ಯಶಸ್ಸು ಕಾಣಲು ನಮ್ಮ ತಾಯಿಯ ಪಾತ್ರದ ಜೊತೆಗೆ ಶಿಕ್ಷಕರ ಪಾತ್ರವು ಬಹುಮುಖ್ಯವಾಗಿತ್ತು. ತಾಯಂದಿರು ಮೊಬೈಲ್ ಬಳಕೆ ಕಡಿಮೆ ಮಾಡಿ, ಮಕ್ಕಳಿಗಾಗಿ ಸಮಯವನ್ನು ನೀಡಿದರೆ, ಮಗು ಅನುಕರಣೆಯಿಂದ ಕಲಿಯುತ್ತದೆ. ಮೊಬೈಲ್ ಬಿಟ್ಟು ಪುಸ್ತಕವನ್ನು ನಿಮ್ಮ ಮಗುವಿನ ಕೈಗಿಡಿ ಮುಂದೊಂದು ದಿನ ನಿಮ್ಮ ಮಗು ನಿಮ್ಮ ಕೈಗಳಿಗೆ ತಾನು ಗೆದ್ದ ಪ್ರಶಸ್ತಿಯನ್ನು ನೀಡುತ್ತದೆ. ಹೀಗೆ ಎಲ್ಲ ತಾಯಂದಿರು ಮಾಡಿದರೆ ನಿಮ್ಮ ಮಗು ಯಶಸ್ಸು ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಶಿಕ್ಷಕರು ಸಹ ಮಕ್ಕಳೊಂದಿಗೆ ಬೇಧ ಭಾವವಿಲ್ಲದೆ ಬೆರೆತು ಸುಸಜ್ಜಿತರಾಗಿ ನಡೆದುಕೊಂಡು ಶಿಕ್ಷಣದ ಕಡೆಗೆ ಒತ್ತು ನೀಡಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳ ಮನೋರಂಜನೆ ಕಾರ್ಯಕ್ರಮವು ಮೆರಗು ತಂದವು. ಸಂಸ್ಥೆಯ ಕಾರ್ಯದರ್ಶಿ ಶ್ರೀದೇವಿ ಕೋತಿನ, ಶಿಕ್ಷಕರಾದ ನಾಜರಿನ್ ಶೇಖ್, ಶ್ರೀಧರ ರಾಮದುರ್ಗ, ಕಾವ್ಯ ಗದ್ದಿಹಳ್ಳಿ, ಸುಮಂಗಲಾ ಅಣ್ಣಿಗೇರಿ, ಚಂದ್ರಿಕಾ ಪಲ್ಲೇದ, ಸ್ನೇಹ ಪೂಜಾರಿ, ಶಿಲ್ಪಾ ಬೇಟಗೇರಿ, ಸುನಿತಾ ಹೊಸಗೌಡ್ರ, ಸವಿತಾ ಅಸೂಟಿ, ಸುಷ್ಮಾ ನವಲೆ, ಜ್ಯೋತಿ ಜಾಸೂದ, ಲಕ್ಷ್ಮಿ ತೆಗ್ಗಿನಮನಿ, ಪವಿತ್ರ ಕೋಟನ್ನವರ, ಬಸಮ್ಮ ದೊಡ್ಡಗಾಣಿಗೇರ, ವನಿತಾ ಶಿಂಧೆ, ಶೈಲಾ ಕಿಳಿಕೇತಾರ, ಗಿರೀಶ್ ಖಾನಪೇಠ, ಸೇರಿದಂತೆ ಮುಂತಾದವರು ಉಪಸ್ತಿತರಿದ್ದರು.