ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅರಮನೆ ಮಂಡಳಿಗೆ ಹಿರಿಯ ಕೆಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿ, ಅರಮನೆಯನ್ನು ಉಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಗಳು ಯಾರ ಮಾತನ್ನು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಅರಮನೆ ಮಂಡಳಿಯಲ್ಲಿ ಲೂಟಿ ನಡೆದಿದೆ. ಅರಮನೆ ಮಂಡಳಿಗೆ ಕೆಎಸ್ಎಸ್ ಅಧಿಕಾರಿಯನ್ನು ನೇಮಿಸುವಂತೆ 2013 ರಲ್ಲೇ ಆದೇಶವಾಗಿದೆ. ಆದರೆ ಇನ್ನೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಎಲ್ಲೆಡೆ ಸಿದ್ದರಾಮಯ್ಯ ಚೇಲಾಗಳೇ ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಅರಮನೆಯನ್ನು ಅಡವಿಟ್ಟರೂ ಅಚ್ಚರಿಯಿಲ್ಲ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು. ರಾಜ್ಯ ಸರ್ಕಾರ ಇತ್ತ ಗಮನ ಕೊಡಬೇಕು. ಅರಮನೆ ವಿಶ್ವವಿಖ್ಯಾತ ಆಗಿದೆ. ಅರಮನೆ ಮಂಡಳಿಯಲ್ಲಿ ನಡೆಯುತ್ತಿರುವ ಲೂಟಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಜೂ.26 ರಂದು ದಸರಾ ಆಚರಣೆ ಸಂಬಂಧ ಉನ್ನತ ಸಮಿತಿ ಸಭೆ ಇದೆ. ಅಧಿಕಾರಿಗಳು ಸಿಎಂ ಅವರನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅರಮನೆಗೆ ಬರುವ ಪ್ರವಾಸಿಗರ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇದನ್ನು ಕೇಳುವವರೇ ಯಾರು ಇಲ್ಲ. ಸಿಎಂ ಕ್ಷೇತ್ರದಲ್ಲಿ ಮುಡಾ ಹಾಳಾಯ್ತು. ಅರಮನೆ ದಿವಾಳಿ ಆಗ್ತಿದೆ. ಮೈಸೂರು ಅರಮನೆಗೆ ವಿಶ್ವವಿಖ್ಯಾತ ಮನ್ನಣೆ ಇದೆ. ಅರಮನೆ ನಿರ್ವಹಣೆಯನ್ನು ಮಹಾರಾಜರಿಗೆ ಕೊಡೋದು ಒಳ್ಳೆಯದು ಎಂದರು.
ಮೂರು ಜನ ಗುಂಪು ಕಟ್ಟಿಕೊಂಡು ದಸರಾ ಆಚರಣೆ ಮಾಡ್ತಾರೆ. ಎಲ್ಲಾ ಕಡೆ ಸಿದ್ದರಾಮಯ್ಯ ಶಿಷ್ಯರೇ ಕುಳಿತು ಹಾಳು ಮಾಡಿದ್ದಾರೆ. ಮಿಸ್ಟರ್ ಸಿದ್ದರಾಮಯ್ಯ ಇನ್ನೇನು ಉದ್ದಾರ ಮಾಡ್ತೀರಾ? ಸರ್ಕಾರ ಮೈಸೂರು ಅರಮನೆ ಕಡೆಗೆ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.- ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಕುಟುಂಬದ ಪ್ರಾಬಲ್ಯ ಮುಗಿಸುವುದು ಸಿಎಂ ಪ್ಲಾನ್-
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕೆಲ ಶಾಸಕರು ಸ್ಪರ್ಧಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಅವರು, ಶಾಸಕರಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಇದ್ದಾರೆ. ಸಹಕಾರ ಕ್ಷೇತ್ರದಲ್ಲಿ ಇವರ ಹಿಡಿತ ತಪ್ಪಿಸಬೇಕು. ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬೇಕು ಅಂತ ಸಿದ್ದರಾಮಯ್ಯ ಈ ರೀತಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತದೆ. ಶಾಸಕರೇ ಚುನಾವಣೆಗೆ ನಿಂತರೆ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡ ಕುಟುಂಬದ ಪ್ರಾಬಲ್ಯ ಮುಗಿಸುವುದು ಸಿಎಂ ಸಿದ್ದರಾಮಯ್ಯ ಪ್ಲಾನ್ ಎಂದು ಅವರು ದೂರಿದರು.