ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೊಣನೂರಿನ ಗ್ರಾ.ಪಂ ಕಟ್ಟಡದ ಮೊದಲನೇ ಅಂತಸ್ತಿನಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಭವನವನ್ನು ಹಾಗೂ 12 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಾಯತಿಯು ಸಾರ್ವಜನಿಕರಿಗೆ ಸದುಪಯೋಗವಾಗಬೇಕು. ನಾವು ಶಾಶ್ವತವಲ್ಲ, ನಾವು ಮಾಡುವ ಕೆಲಸವೇ ಶಾಶ್ವತ. ಜುನಾಯಿತ ಪ್ರತಿನಿಧಿಗಳು ತಮಗೆ ಸಿಕ್ಕಂತಹ ಅವಕಾಶದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹಾಗೂ ಗ್ರಾಮಗಳಿಗೆ ಶಾಶ್ವತವಾದಂತಹ ಕೆಲಸಗಳನ್ನು ಮಾಡಬೇಕು. ನನ್ನ ಅವಧಿಯಲ್ಲಿ ಜಲಜೀವನ್ ಮೂಲಕ ಇಡೀ ತಾಲೂಕಿನ ಮನೆಮನೆಗೂ ನೀರು ಒದಗಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಹೆದ್ದಾರಿಯಾದ ನಂತರ ಈ ಭಾಗದ ಭೂಮಿಯ ಬೆಲೆ ಜಾಸ್ತಿಯಾಗಿದೆ ಎಂದು ಯಾರೂ ಜಮೀನನ್ನು ಮಾರಾಟ ಮಾಡಿಕೊಳ್ಳಬೇಡಿ. ಮಾಗಡಿ - ಬಾಣಾವರ ರಾಜ್ಯ ಹೆದ್ದಾರಿ ಕಾಮಗಾರಿ ರಸ್ತೆ ಬಹುತೇಕ ಮುಗಿದಿದ್ದು ಭುವಂಗಾಲದಿಂದ ಬಾಣಾವರ ವರೆಗಿನ ಬಾಕಿ ಉಳಿದಿರುವ 600 ಮೀಟರ್ ರಸ್ತೆ ಕಾಮಗಾರಿಯನ್ನು 5 ಕೋಟಿ ರು. ವೆಚ್ಚದಲ್ಲಿ ಈ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಕಟ್ಟೇಪುರ - ಕೊಣನೂರು ಸಂಪರ್ಕಕ್ಕೆ ಶಾಶ್ವತ ಸೇತುವೆಗಾಗಿ ಸರ್ಕಾರಕ್ಕೆ ಸುಮಾರು 38 ಕೋಟಿ ರು. ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆತು ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್, ಉಪಾಧ್ಯಕ್ಷೆ ಜಯಮ್ಮ ಸೋಮಶೇಖರ್, ಸದಸ್ಯರು, ಪಿಡಿಒ ಎಸ್.ಎಂ. ದಿವಾಕರ್, ಮಂಜುನಾಥ್, ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಓಬಯ್ಯ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತಿ ಸಿಬ್ಬಂದಿ, ಕೊಣನೂರು, ಕೆರೆಕೋಡಿ, ಗೊರೆದಿಣ್ಣೆ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.