ಕನ್ನಡಪ್ರಭ ವಾರ್ತೆ ಮೈಸೂರುಕಳೆದ ಭಾನುವಾರ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಸಂಸ್ಥೆಯ ಮೈಸೂರು ವಿಭಾಗದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು.ವಿಜಯನಗರದ ಮುಲಕನಾಡು ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮೈಸೂರು ವಲಯ ಅಧ್ಯಕ್ಷ ಡಾ. ರಮಾಕಾಂತ್ ಶೆಣೈ ಮಾತನಾಡಿ, ಮುಖ್ಯವಾಗಿ ಎರಡನೇ ವರ್ಷದ ಕಾರ್ಯಕ್ರಮದ ವಿಶೇಷ ಏನೆಂದರೆ, ಚಿಕ್ಕ ಮಕ್ಕಳು ಕೂಡ ಈ ವಿಷ್ಣು ಸಹಸ್ರನಾಮದ ಪಾರಾಯಣದಲ್ಲಿ ಪಾಲ್ಗೊಂಡು ಸಂಸ್ಕೃತಿ, ಸಂಸ್ಕಾರವನ್ನು ಮುಂದುವರೆಸುವ ಭರವಸೆಯನ್ನು ತೋರಿದ್ದಾರೆ ಎಂದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಪಾರ್ಥಸಾರಥಿ ಗುರುಗಳ ರಚನೆಯ ಭಾಗವತ ಆಂಗ್ಲ ಪುಸ್ತಕವನ್ನ ಬಿಡುಗಡೆಗೊಳಿಸಿ ಮಾತನಾಡಿ, ಜನಗಳಲ್ಲಿ ಧಾರ್ಮಿಕ ಶ್ರದ್ಧೆ ಕಂಡು ಬರುತ್ತಿದೆ ಎಂಬ ವಿಷಯ ಸಂತೋಷದ ಸಂಗತಿ. ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚಲಿ ಎಂದರು.ಇಂತಹ ಕಾರ್ಯಕ್ರಮಗಳನ್ನು ಆನ್ಲೈನ್ ನಲ್ಲೂ ಕೂಡ ನಡೆಸುತ್ತಿರುವುದನ್ನು ನಾನು ವೀಕ್ಷಣೆ ಮಾಡಿದೆ. ಇದೊಂದು ಆರೋಗ್ಯಪೂರ್ಣ ವಿಚಾರವಾಗಿದ್ದು. ಅತೀ ಹೆಚ್ಚು ಜನಕ್ಕೆ ತಲುಪುವಂತಹ ಕಾರ್ಯ ಈ ಸಂಸ್ಥೆ ಮಾಡುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.ಡಿ.ಟಿ. ಪ್ರಕಾಶ್ ಅವರು ಸನಾತನ ಧರ್ಮದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲು ಕರೆ ನೀಡಿದರು. ಮಹೇಶ್ ಕಾಮತ್ ಅವರು ಭಾರತದಲ್ಲಿ ಸಿಂಧೂರದ ಪ್ರಾಮುಖ್ಯತೆಯ ಬಗ್ಗೆ ವರ್ಣಿಸಿದರು.ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗ್ಲೋಬಲ್ ವಿಷ್ಣು ಸಹಸ್ರ ನಾಮ ಸಂಸ್ಥೆಯ ಮೈಸೂರು ವಿಭಾಗದಲ್ಲಿ ರೂಪಿತವಾಗಿರುವ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾಗಿ ಮಕ್ಕಳು ಪಾಲ್ಗೊಂಡಿರುವುದು ಹೆಮ್ಮೆ ತಂದಿದೆ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು ಎನ್ನುವಂತೆ ಈ ಹಂತದಲ್ಲಿ ನಾವು ಮಕ್ಕಳಿಗೆ ಸಂಸ್ಕಾರಯುತ, ಆಧ್ಯಾತ್ಮ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಹೇಳುತ್ತಾ ಬಂದರೆ ಅವರು ಮುಂದೊಂದು ದಿನ ಎಲ್ಲಾ ಅಂಶಗಳನ್ನು ರೂಢಿಸಿಕೊಂಡು ಓದಿನ ಜೊತೆಗೆ ಮುಂದುವರಿಯುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ವಾಸುದೇವ ರಾವ್, ಭಾನುಪ್ರಕಾಶ್, ಮಂಗಳಾ ಭಾಸ್ಕರ್, ಕ್ಯಾಪ್ಟನ್ ಮಣಿ ಮೊದಲಾದವರು ಪಾಲ್ಗೊಂಡಿದ್ದರು.