ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಡೇ ಕ್ಷಣದಲ್ಲಿ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಹೆಣೆದ ತಂತ್ರಗಾರಿಕೆ ಫಲ ನೀಡಿದ್ದು ಪಿಎಲ್ಡಿ ಬ್ಯಾಂಕ್ ಜೆಡಿಎಸ್ ತೆಕ್ಕೆಗೆ ಬಿದ್ದಿದೆ.ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಎನ್. ಆರ್.ಸಂತೋಷ್ ಕಟ್ಟಾ ಬೆಂಬಲಿಗ ಶಶಿವಾಳ ಗಂಗಾಧರ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬೇವಿನಹಳ್ಳಿ ಯೋಗೀಶ್(ರವಿ) ಅವಿರೋಧವಾಗಿ ಆಯ್ಕೆಯಾಗಿದ್ಥಾರೆ.ಹದಿನೈದು ಸದಸ್ಯ ಬಲದ ಬ್ಯಾಂಕಿನ ನಿರ್ದೇಶಕರ ಪೈಕಿ ಗಂಗಾಧರ್ ಹಾಗೂ ಯೋಗೀಶ್ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ದೇವರಾಜ್ ಅವಿರೋಧ ಆಯ್ಕೆ ಪ್ರಕಟಿಸಿದರು. ಸುದ್ದಿ ತಿಳಿಯುತ್ತಲೇ ಹೊರಗೆ ನೆರದಿದ್ದ ಮುಖಂಡರು, ಬೆಂಬಲಿಗರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಿಹಿ ಹಂಚಿದ್ದಲ್ಲದೇ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು.
ಅಧ್ಯಕ್ಷ ಶಶಿವಾಳ ಗಂಗಾಧರ್ ಮಾತನಾಡಿ, ಮೂರನೇ ಬಾರಿಗೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷನಾಗಿ ಆಯ್ಕೆಯಾಗಲು ನಿರ್ದೇಶಕರು ಬೆಂಬಲ ನೀಡಿದ್ದಾರೆ. ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಎಲ್ಲರನ್ನೂ ಒಗ್ಗೂಡಿಸಿ ಅಧಿಕಾರ ಹಿಡಿಯಲು ಅನುವು ಮಾಡಿಕೊಟ್ಟಿದ್ದು ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ನನಗೆ ದೊರೆತಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ರೈತರ ಹಿತಕಾಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಸದಸ್ಯರು ಹಾಗೂ ಷೇರುದಾರರಿಗೆ ಭರವಸೆ ನೀಡಿದರು.ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಮಾತನಾಡಿ, ಗ್ರಾಮೀಣ ಜನರ ಶ್ರೇಯೋಭಿವೃದ್ಧಿ ಬ್ಯಾಂಕಿನ ಮೊದಲ ಆದ್ಯತೆ ಆಗಬೇಕು. ಸಾಲ ಪಡೆಯಲು ಬರುವ ರೈತರ ಹಿತ ಮನಗಂಡು ಕಾರ್ಯ ನಿರ್ವಹಿಸಿದರೆ ಆಯ್ಕೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಕೆಲಸ ಮಾಡಬೇಕುಹೈನುಗಾರಿಕೆ, ಜಮೀನು ಅಭಿವೃದ್ಧಿ, ಕೃಷಿ ಪರಿಕರ ಖರಿಗೆ ನೆರವು ಸೇರಿದಂತೆ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ಪಕ್ಷಾತೀತವಾಗಿ ಒದಗಿಸಬೇಕು ಎಂದು ಸಲಹೆ ನೀಡಿದರು. ನಿರ್ದೇಶಕರಾದ ಯಳವಾರೆ ಸಿದ್ದೇಶ್, ಟಿ.ಎಂ.ಪರಮೇಶ್ವರಪ್ಪ, ಭೋಜಾನಾಯ್ಕ್, ಸಿದ್ದೇಗೌಡ, ದೇವರಾಜ್ ಸೇರಿದಂತೆ ಹಲವರು ಹಾಜರಿದ್ದರು.ಹಾಸನ ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮುಖಂಡರು ಹಾರ ಹಾಕಿ ನಮಿಸಿದರು.
ಆಶೀರ್ವಾದ: ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಅನುಭವ ಮಂಟಪದ ಬಿಡಾರಕ್ಕೆ ತೆರಳಿದ ಗಂಗಾಧರ್ ಮತ್ತು ಯೋಗೀಶ್ ಶಿವಪ್ರಕಾಶ ಸ್ವಾಮೀಜಿಯ ಆಶೀರ್ವಾದ ಪಡೆದರು. ಭಕ್ತರನ್ನು ಕುರಿತು ಮಾತನಾಡಿದ ಶ್ರೀಗಳು, ಸಾಲ ಪಡೆದವರು ತೀರುವಳಿ ಮಾಡಿದರೂ ಸಾಲಮನ್ನಾ ಪ್ರಯೋಜನ ನೆರವು ದೊರೆಯುತ್ತಿಲ್ಲ. ಇಂತಹ ಗಂಭೀರ ವಿಷಯದ ಬಗ್ಗೆ ಚಿಂತನೆ ನಡೆಸಿ ಅನ್ನದಾತರ ನೆರವಿಗೆ ಧಾವಿಸಬೆಕು. ಆಗ ಮಾತ್ರವೇ ಅಧಿಕಾರ ಪಡೆದಿದ್ದು ಉಪಕಾರಿಯಾಗಲಿದೆ ಎಂದು ಹೇಳಿದರು. ಸಮಾಜದ ಮುಖಂಡರಾದ ಹಿರಿಯೂರು ರೇವಣ್ಣ, ಅಗ್ಗುಂದ ಶೇಖರಣ್ಣ,ದುಮ್ಮೇನಹಳ್ಳಿ ಕುಮಾರ್, ಶೇಖರಪ್ಪ, ಇತರರು ಹಾಜರಿದ್ದರು.