ಪರಸ್ಪರ ಮುನಿಸು ಇದ್ದುದ್ದಿದ್ದರಿಂದ ಎಲ್ಲಿಯೂ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರಲಿಲ್ಲ.
ಕೊಪ್ಪಳ: ಭಿನ್ನಾಭಿಪ್ರಾಯ ಮರೆತು ಪಂಚಮಸಾಲಿ ಪೀಠದ ಜಗದ್ಗುರುಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ಅಲ್ಲದೆ, ಪರಸ್ಪರ ಮಾತನಾಡಿ ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಸಹ ಹೇಳಿದ್ದಾರೆ.
ಹೌದು, ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ಶ್ರೀ ವಚನಾನಂದಸ್ವಾಮೀಜಿ ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ಅಲ್ಲದೆ, ಪರಸ್ಪರ ಜೊತೆಯಾಗಿ ದೀಪ ಬೆಳಗಿಸಿದ್ದಾರೆ.
ಪರಸ್ಪರ ಮುನಿಸು ಇದ್ದುದ್ದಿದ್ದರಿಂದ ಎಲ್ಲಿಯೂ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ, ಈ ಬಾರಿ ಜೊತೆಯಾಗಿಯೇ ಭಾಗವಹಿಸಿದ್ದಾರೆ.
ಕಾರ್ಯಕ್ರಮದ ನಂತರ ಜಯಮೃತ್ಯಂಜಯ ಸ್ವಾಮೀಜಿ ಮಾತನಾಡಿ, ನಾವು ಒಂದಾಗಿದ್ದೇವೆ ಎನ್ನುವುದಕ್ಕಿಂತ ಭಕ್ತರ ಅಪೇಕ್ಷೆಯ ಮೇರೆಗೆ ಕೋರಿಕೊಂಡಿದ್ದರಿಂದ ಬಂದು ಭಾಗವಹಿಸಿದ್ದೇವೆ. ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ದೇವೇಂದ್ರಪ್ಪ ಬಳೂಟಗಿ ಸೇರಿದಂತೆ ಕೆಲವರು ಕೋರಿಕೊಂಡಿದ್ದರಿಂದ ಜೊತೆಯಾಗಿಯೇ ಭಾಗವಹಿಸಿದ್ದೇವೆ ಎಂದಿದ್ದಾರೆ.
ವೇದಿಕೆಯಲ್ಲಿಯೇ ಮಾತನಾಡಿದ ಹರಿಹರಪೀಠದ ವಚನಾನಂದಸ್ವಾಮೀಜಿ ಮಾತನಾಡಿ, ಕೂಡಲಸಂಗಮ ಪೀಠದ ಜಯಮೃತ್ಯಂಜಯ ಸ್ವಾಮೀಜಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಸಮಾಜ ಸೇವೆ ಮಾಡುತ್ತಿರುವ ಖಾವಿಧಾರಿಗಳು ಆಗಿದ್ದೇವೆ. ನಾವು ಒಂದೇ ಇದ್ದೇವೆ, ನೀವು ಮೊದಲು ಒಂದಾಗಿ ಎಂದು ಸ್ಪಷ್ಪಡಿಸಿದರು.
ದೀಪ ಬೆಳಗುವ ವೇಳೆಯಲ್ಲಿ ಮಧ್ಯ ಪ್ರವೇಶ ಮಾಡಿದ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಮೆಣದಬತ್ತಿಯನ್ನು ತಾವು ಕೈಯಲ್ಲಿ ಹಿಡಿದುಕೊಂಡು, ಇಬ್ಬರು ಶ್ರೀಗಳ ಕೈ ಹಿಡಿದು ಜೊತೆಯಾಗಿ ಉದ್ಘಾಟನೆ ಮಾಡಿಸುವ ಮೂಲಕ ಇಬ್ಬರು ಸ್ವಾಮೀಜಿಗಳು ಒಂದಾಗಿದ್ದಾರೆ ಎನ್ನುವ ಸಂದೇಶ ಸಾರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.