ಉಗ್ರರ ನೆಲೆಗಳ ಧ್ವಂಸಗೈದ ಸೇನೆ, ಮೋದಿ ಸರ್ಕಾರಕ್ಕೆ ಅಭಿನಂದನೆ

KannadaprabhaNewsNetwork |  
Published : May 08, 2025, 12:30 AM IST
(ವಿ.ಸೋಮಣ್ಣ) | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ ಭಾರತೀಯರ ಜೀವ ತೆಗೆದು, ವಿಕೃತಿ ಮೆರೆದಿದ್ದ ಭಯೋತ್ಪಾದಕರ 9 ನೆಲೆಗಳನ್ನೇ ಧ್ವಂಸಗೈಯ್ಯುವ ಮೂಲಕ ಭಾರತದ ಹೆಮ್ಮೆಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವಾ ರಾಜನಾಥ್‌ ಸಿಂಗ್‌ ಅವರನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ದಾವಣಗೆರೆಯಲ್ಲಿ ಅಭಿನಂದಿಸಿದ್ದಾರೆ.

- ಆಪರೇಷನ್ ಸಿಂಧೂರ ದಾಳಿಗೆ ಜಗತ್ತೇ ಕೊಂಡಾಡುತ್ತಿದೆ: ಕೇಂದ್ರ ಸಚಿವ ವಿ.ಸೋಮಣ್ಣ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ ಭಾರತೀಯರ ಜೀವ ತೆಗೆದು, ವಿಕೃತಿ ಮೆರೆದಿದ್ದ ಭಯೋತ್ಪಾದಕರ 9 ನೆಲೆಗಳನ್ನೇ ಧ್ವಂಸಗೈಯ್ಯುವ ಮೂಲಕ ಭಾರತದ ಹೆಮ್ಮೆಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವಾ ರಾಜನಾಥ್‌ ಸಿಂಗ್‌ ಅವರನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿನಂದಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿ ಕಾರ್ಯಾಚರಣೆ ಕೈಗೊಂಡ ಹೆಮ್ಮೆಯ ಸೈನಿಕರು, ಕೇಂದ್ರ ಸರ್ಕಾರವನ್ನು ಇಡೀ ದೇಶದ ಜನತೆಯೇ ಅಭಿನಂದಿಸುತ್ತಿದೆ ಎಂದರು.

ಧರ್ಮಾಧಾರಿತ ಭಯೋತ್ಪಾದನೆ ದಾಳಿ ಮಾಡಿದ ಹೇಡಿ ಉಗ್ರಗಾಮಿಗಳಿಗೆ ಮತ್ತು ಅಂತಹ ಉಗ್ರರಿಗೆ ಆಶ್ರಯ, ನೆರವು ನೀಡುವ ಪಾಕಿಸ್ತಾನಕ್ಕೆ ಇದು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಪಾಠವಾಗಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರಗಾಮಿಗಳ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಉಗ್ರ ಸಂಹಾರ ಮಾಡಲಾಗಿದೆ. ಈ ಮೂಲಕ ಉಗ್ರರ ತಾಣಗಳನ್ನೇ ನಮ್ಮ ಯೋಧರು ನಾಶಪಡಿಸಿದ್ದಾರೆ ಎಂದು ಹೇಳಿದರು.

ಭವಿಷ್ಯದ ಭಾರತಕ್ಕೆ ಒಂದು ನೆಲೆಗಟ್ಟು ಕೊಡುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ನಿಗ್ರಹಿಸಲು ತೆಗೆದುಕೊಳ್ಳುವ ನಿರ್ಧಾರಕ್ಕೆ ವಿಪಕ್ಷಗಳು, ವಿವಿಧ ದೇಶಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ವಿಶ್ವ ಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಜೈಶ್‌-ಎ-ಮೊಹಮ್ಮದ್‌ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರರ ಸಂಘಟನೆಗಳು ನಡೆಸುತ್ತಿದ್ದ ಭಯೋತ್ಪಾದಕರ ತರಬೇತಿ ಶಿಬಿರದ ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿವೆ. ಈಗಾಗಲೇ ಭಾರತೀಯ ಸೇನಾಧಿಕಾರಿಗಳೇ ಇದನ್ನು ಸಾರಿದ್ದಾರೆ ಎಂದರು.

ಭಾರತದ ರಕ್ಷಣಾ ವ್ಯವಸ್ಥೆ ಅತ್ಯಂತ ಸದೃಢವಾಗಿದೆ. ಭಾರತ ಶಾಂತಿಪ್ರಿಯ ದೇಶ. ದೇಶದ ಮೇಲಿನ ಆಕಸ್ಮಿಕವಾಗಲೀ, ಉದ್ದೇಶ ಪೂರ್ವಕ ದಾಳಿಗಳನ್ನೇ ಆಗಲಿ ಭಾರತ ಎಂದಿಗೂ ಸಹಿಸುವುದಿಲ್ಲ. ಭಯೋತ್ಪಾದನೆ ಬುಡಸಮೇತ ಕೀಳಲು ಭಾರತ ಸನ್ನದ್ಧವಾಗಿದೆ. ಈ ಹಿನ್ನೆಲೆ ಭಾರತ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಈಗಾಗಲೇ ಸರ್ವಪಕ್ಷಗಳ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ ವ್ಯಕ್ತವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಸಹ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ. ಭಯೋತ್ಪಾದನೆ ನಿಗ್ರಹಿಸುವ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸಲು ಪ್ರಧಾನಿ ನರೇಂದ್ರ ಮೋದಿ ಕೋಟೆ ಸುಭದ್ರವಾಗಿದೆ ಎಂದು ವಿ.ಸೋಮಣ್ಣ ಬಣ್ಣಿಸಿದರು.

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ, ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ಮುರುಗೇಶ ಆರಾಧ್ಯ, ಅಣಬೇರು ಜೀವನಮೂರ್ತಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ರೈಲ್ವೆ ಅಧಿಕಾರಿಗಳು ಇದ್ದರು.

- - -

(ಕೋಟ್‌) ಭಾರತದ ಮೇಲೆ ನಡೆದ 16 ಕಹಿ ಘಟನೆಗಳನ್ನೂ ಭಾರತೀಯ ಸೇನೆ ಮೆಲಕು ಹಾಕಿದೆ. ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಅಡ್ಡಿ ಮಾಡಿದರೆ, ಭಾರತೀಯ ಸೇನೆ ಅದಕ್ಕೆ ತಕ್ಕ ಉತ್ತರ ಕೊಡುತ್ತದೆಂದು ಮೂರೂ ಸೇನೆಯ ಮುಖ್ಯಸ್ಥರೇ ಎಚ್ಚರಿಕೆ ನೀಡಿದ್ದಾರೆ.

- ವಿ.ಸೋಮಣ್ಣ, ಕೇಂದ್ರ ಸಚಿವ

- - -

-7ಕೆಡಿವಿಜಿ:

ದಾವಣಗೆರೆಯಲ್ಲಿ ಬುಧ‍ವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ, ಇತರ ಗಣ್ಯರು, ಮುಖಂಡರು ಇದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ