ಕನ್ನಡಪ್ರಭ ವಾರ್ತೆ ದಾವಣಗೆರೆ
ಕಲಬುರಗಿ ವಾಸಿಗಳಾದ ಮೆಹಂದಿ ಹಾಕುವ ಕೆಲಸಗಾರರಾದ ಸುನೀತಾ ಸಖಾ (48 ವರ್ಷ) ಹಾಗೂ ರಾತಿಯಾ ಕೃಷ್ಣ ಉಪಾಧ್ಯಾಯ (40) ಬಂಧಿತ ಆರೋಪಿಗಳು. ಹರಿಹರ ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕುಮಾರ ಪಟ್ಟಣಂ ವಾಸಿ ಪಿ.ಎಂ.ಪವಿತ್ರಾ ಪ್ರಕಾಶ ಕಳೆದ ಫೆ.13ರಂದು ತಮ್ಮ ಸ್ವಂತ ಊರಾದ ನಾಗಸಮುದ್ರಕ್ಕೆ ಹೋಗಲು ಶಿವಮೊಗ್ಗ ಬಸ್ ಹತ್ತಿದ್ದರು. ಈ ವೇಳೆ ನೂಕು ನುಗ್ಗಲಿನಲ್ಲಿ ತಮ್ಮ ಕೊರಳಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರ ಕಳುವಾದ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಆರೋಪಿಗಳ ಪತ್ತೆಯಾಗಿ ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ಇನ್ಸಪೆಕ್ಟರ್ ಎಸ್. ದೇವಾನಂದ ನೇತೃತ್ವದಲ್ಲಿ ಪಿಎಸ್ಐಗಳಾದ ಶ್ರೀಪತಿ ಗಿನ್ನಿ, ಜಿ.ಎಸ್. ವಿಜಯ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಸುನಿತಾ ಸಖಾ, ರಾತಿಯಾ ಕೃಷ್ಣ ಉಪಾಧ್ಯಾಯ ಪುನಃ ಕಳ್ಳತನ ಮಾಡಲೆಂದು ಅ.30ರಂದು ಹರಿಹರ ಬಸ್ಸು ನಿಲ್ದಾಣಕ್ಕೆ ಬಂದಾಗ ಇಬ್ಬರನ್ನೂ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಯಿತು. ಬಂಧಿತರಿಂದ ಹರಿಹರ ನಗರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಗ್ರಾಂ ತೂಕದ ಚಿನ್ನದ ಸರ ಹಾಗೂ ಶಿಕಾರಿಪುರ ನಗರ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಗ್ರಾಂ ತೂಕದ ಕೊರಳಿನ ಚಿನ್ನದ ಸರ ಸೇರಿದಂತೆ ಒಟ್ಟು ₹4.50 ಲಕ್ಷ ಮೌಲ್ಯದ 65 ಗ್ರಾಂ ಚಿನ್ನಾಭರಣ ಜಪ್ತು ಮಾಡಲಾಗಿದೆ. ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿ ಮಹಿಳೆಯರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಹರಿಹರ ನಗರ ಠಾಣೆಯ ಸಿಬ್ಬಂದಿಯಾದ ನಾಗರಾಜ ಸುಣಗಾರ, ಆರ್. ರವಿ, ಎಚ್. ಸಿದ್ದೇಶ, ಎಚ್. ರವಿನಾಯ್ಕ, ಕೆ.ಸಿ. ರುದ್ರಸ್ವಾಮಿ, ಹನುಮಂತ ಗೋಪನಾಳ, ಕೆ. ರವಿ, ಎಸ್.ಬಿ. ಸಿದ್ದರಾಜು, ಪ್ರೇಮಾ ಕರಿಯಪ್ಪ, ರೇಣುಕಾ, ಕವಿತಾ, ಕಾಳಮ್ಮ ಅವರನ್ನು ಒಳಗೊಂಡ ತಂಡ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.