ಭದ್ರಾವತಿ: ಓರ್ವ ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ ಹಾಗೂ ಮೊಬೈಲ್ ಕಾಣೆಯಾಗಿರುವ ಸಂಬಂಧ ಸಿ-ಪೋರ್ಟಲ್ನಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಿವಿಧ ಕಂಪನಿಗಳ ೧೫ ಮೊಬೈಲ್ಗಳನ್ನು ಪತ್ತೆ ಹಚ್ಚುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂ.೮ ರಂದು ಮದ್ಯಾಹ್ನ ೨ ಗಂಟೆ ಸಮಯದಲ್ಲಿ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಕೆ.ಎನ್ ಕಿರಣ ಎಂಬುವರು ನಗರದ ಸಿ.ಎನ್ ರಸ್ತೆ ಡಬಲ್ ಟಾಕೀಸ್ ಎದುರುಗಡೆ ಮೊಬೈಲ್ನಲ್ಲಿ ಮಾತನಾಡುತ್ತಾ ಹೋಗುತ್ತಿರುವಾಗ ಯಾರೋ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅದರಲ್ಲಿ ಒಬ್ಬ ಒತ್ತಾಯ ಪೂರ್ವಕವಾಗಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೊಬೈಲ್ ಹಾಗೂ ಆರೋಪಿಗಳ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಮತ್ತು ಎ.ಜಿ ಕಾರಿಯಪ್ಪ ಮಾರ್ಗದರ್ಶನದಲ್ಲಿ ಪ್ರಭಾರ ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತಾರ್ ಮೇಲ್ವಿಚಾರಣೆಯಲ್ಲಿ, ನಗರ ವೃತ್ತ ನಿರೀಕ್ಷಕ ಶ್ರೀ ಶೈಲಕುಮಾರ್ ನೇತೃತ್ವದಲ್ಲಿ ಠಾಣಾ ಉಪ ನಿರೀಕ್ಷಕ ಶರಣಪ್ಪ ಹಂಡ್ರಗಲ್, ಸಿಬ್ಬಂದಿಗಳಾದ ಹಾಲಪ್ಪ, ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಸಣ್ಣತಂಗೇರ ಮತ್ತು ಜಿ.ಎ ಪ್ರವೀಣ್ ಅವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ಈ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಸಿ-ಪೋರ್ಟಲ್ನಲ್ಲಿ ದಾಖಲಾದ ಮೊಬೈಲ್ ಕಾಣೆ ಪ್ರಕರಣಗಳಲ್ಲಿ ಸುಮಾರು ಒಟ್ಟು ೨,೫೦,೦೦೦ ರು. ಬೆಲೆ ಬಾಳುವ ೧೫ ವಿವಿಧ ಕಂಪನಿಗಳ ಮೊಬೈಲ್ಗಳನ್ನು ಸಹ ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.