- ಬಿಳಿಚೋಡಿನಲ್ಲಿ ಶ್ರಾವಣ ಸಂಜೆ ಜಾನಪದ ಸಂಗೀತ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮ್ಮ ಬದುಕನ್ನು ಹಸನುಗೊಳಿಸುವ ಮೂಲಕ ಆದರ್ಶಗೊಳಿಸುತ್ತವೆ ಎಂದು ರಂಗಕರ್ಮಿ ಎನ್.ಎಸ್. ರಾಜು ಹೇಳಿದರು.ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಭಜನಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನ ಆವರಣದಲ್ಲಿ ಬಸವ ಕೇಂದ್ರದ ಮಾಸಿಕ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಶ್ರಾವಣ ಸಂಜೆ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು. ಆದರೆ, ಅವರ ಜೀವನ ನೋವಿನಿಂದ ಕೂಡಿರುತ್ತದೆ. ಅನೇಕ ಸಮಸ್ಯೆಗಳನ್ನು ಅನುಭವಿಸುತ್ತ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಕಲಾವಿದರು ವೇದಿಕೆ ಮೇಲೆ ರಾಜಾ, ಮಂತ್ರಿ, ಸೇವಕ, ದೇವಾನುದೇವತೆಗಳ ಪಾತ್ರ ಮಾಡುತ್ತ ಜನರನ್ನು ರಂಜಿಸುತ್ತಾರೆ. ಆದರೆ, ಅವರ ವೈಯುಕ್ತಿಕ ಬದುಕು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುತ್ತದೆ. ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ₹2 ಸಾವಿರ ಮಾಶಾಸನ ಅತ್ಯಲ್ಪವಾಗಿದೆ. ಅದನ್ನು ಕನಿಷ್ಠ ₹5 ಸಾವಿರಕ್ಕೆ ಏರಿಸಲು ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಜಗಳೂರಿನ ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಬಿ.ಎಂ. ವಿಶ್ವೇಶ್ವರಯ್ಯ ಮಾತನಾಡಿ, ಬಸವ ಚಿಂತನೆ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲೂ ನಡೆಸಿದರೆ ಜನರ ಬದುಕು ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು.
ಕುರುಬ ಸಮಾಜದ ಗುರುಗಳಾದ ಶ್ರೀ ಸಿದ್ದಯ್ಯ ಒಡೆಯರ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ನೀಲನಾಯ್ಕ, ಸಮಾಜ ಸೇವಕರಾದ ಸುಧೀರ್ ಕುಮಾರ್, ಮಾರ್ತಾಂಡಪ್ಪ, ಶಿವಾಜಿ ರಾವ್, ಕರೇಗೌಡರ ಮಂಜುನಾಥ್, ಪಿ.ನಾಗೇಂದ್ರಪ್ಪ, ಪಿ.ಜಿ. ಪರಮೇಶ್ವರಪ್ಪ ಇತರರು ಇದ್ದರು.ಶ್ರೀ ಬಸವೇಶ್ವರ ಭಜನಾ ಸಂಘದ ಕಲಾವಿದರು ಜಾನಪದ ಸಂಗೀತ ನಡೆಸಿಕೊಟ್ಟರು.
- - - -30ಕೆಡಿವಿಜಿ35ಃ:ಜಗಳೂರು ತಾಲೂಕಿನ ಬಿಳಿಚೋಡಿನಲ್ಲಿ ನಡೆದ ಶ್ರಾವಣ ಸಂಜೆ ಜಾನಪದ ಸಂಗೀತ ಕಾರ್ಯಕ್ರಮವನ್ನು ಎನ್.ಎಸ್.ರಾಜು ಉದ್ಘಾಟಿಸಿದರು.