ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಪತ್ರಿಕಾ ಭವನದ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಗೆಳೆಯರ ಬಳಗ, ದುರ್ಗದ ಸಿರಿ ಕಲಾ ಸಂಘ ಹಾಗೂ ರೈತಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮೂರ ನೆಂಟರು ಎಂಬ ವಿಶೇಷ ಮಾಲಿಕೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮನೆಯಲ್ಲಿನ ಕಲಾಭಿವ್ಯಕ್ತಿಯನ್ನು ನೋಡಿ ಕಲಿತವನು ನಾನು. ತಂದೆ ಲೋಹಿತಾಶ್ವರು ತಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ. ಚಿಕ್ಕವರಿದ್ದಾಗ ಅವರ ರಂಗಭೂಮಿ ನಾಟಕಗಳನ್ನು ನೋಡಿ ಬೆಳೆದಿದ್ದೇನೆ ಎಂದರು.
ಆರಂಭದಲ್ಲಿ ಚಿತ್ರರಂಗದಲ್ಲಿ ಬೇರೂರಲು ಕಷ್ಟ ಪಟ್ಟಿದ್ದೇನೆ. ಎಷ್ಟೇ ದೊಡ್ಡ ಪಾತ್ರ ಮಾಡಿದರೂ ನಮ್ಮನ್ನು ಬೆಳೆಸುವವರು ಬೇರೆ ಬೇರೆ ಕಾರಣಗಳಿಗೆ ತುಳಿಯಲು ಶುರು ಮಾಡಿದ್ದರು. ಅಂತಹ ಸಮಯಗಳಲ್ಲಿ ನಮ್ಮ ತಂದೆಯವರು ತುಂಬುತ್ತಿದ್ದ ಆತ್ಮಸ್ಥೈರ್ಯ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ ಎಂದರು.ನಾಡಿನ ನೆಲ, ಜಲ, ಭಾಷೆ ವಿಷಯಗಳ ಕುರಿತಾಗಿ ಸದಾ ಎಚ್ಚರದಲ್ಲಿರಬೇಕು. ಅದೇ ರೀತಿ ನಾವು ಹುಟ್ಟಿ ಬೆಳೆದ ಪರಿಸರದ ಬಗ್ಗೆಯೂ ಕಾಳಜಿ ಇರಬೇಕು. ಹಿರಿಯೂರು ಸಮೀಪದ ಹಳ್ಳಿಯಲ್ಲಿ ವಿವಾಹವಾಗಿದ್ದೇನೆ. ಆದರೆ ಇಲ್ಲಿಗೆ ಬಂದು ಇಂತಹ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ. ನಮ್ಮ ತಂದೆಯವರ ಒಡನಾಡಿಗಳು ನನ್ನನ್ನೂ ಕರೆಸಿ ಇಂತಹ ಹೊಸತನದ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್ ಮಾತನಾಡಿ, ಬಹುಭಾಷೆಗಳಲ್ಲಿ ಪ್ರಕಾಶ್ ರಾಜ್ ನಂತರ ಶರತ್ ಅವರ ಅಭಿನಯ ನೋಡುಗರನ್ನು ಮನಸೂರೆಗೊಳ್ಳುವಂತೆ ಮಾಡಿದೆ. ಕಂಚಿನ ಕಂಠದ ಧ್ವನಿ ಹೊಂದಿರುವ ಕನ್ನಡದ ಏಕೈಕ ನಟ ಇವರು. ಖಳನಟರ ಪಾತ್ರಗಳನ್ನು ಮಾಡುವವರನ್ನು ಸಮಾಜ ಖಳರನ್ನಾಗಿ ನೋಡಬಾರದು. ಪರದೆಯ ಮೇಲೆ ಖಳರಾಗಿ ನಟಿಸಿದವರು ನಿಜ ಜೀವನದಲ್ಲಿ ಇರುವುದೇ ಬೇರೆ ಎಂದರು.
ಜಿಲ್ಲಾ ಪತ್ರಕರ್ತರ ಜಿಲ್ಲಾಧ್ಯಕ್ಷ ವಿನಾಯಕ ತೋಡರನಾಳ್ ಮಾತನಾಡಿ, ಚಿತ್ರದುರ್ಗ ಅನೇಕ ಕಲಾವಿದರನ್ನು ಕರೆಸಿಕೊಂಡಿದೆ. ಸಾಕಷ್ಟು ಸಿನೆಮಾಗಳೂ ಈ ನೆಲದಲ್ಲಿ ಆಗಿವೆ. ನಮ್ಮೂರ ನೆಂಟರು ಅತ್ಯಂತ ವಿಶಿಷ್ಟ ಕಾರ್ಯಕ್ರಮವಾಗಿದ್ದು ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಈ ತರಹದ ವಾತಾವರಣ ಕಾಣಸಿಗದೆಂದರು.
ಆಶಯ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಸಾಹಿತ್ಯ, ರಂಗಭೂಮಿ, ಇನ್ನಿತರೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಸರು ಗಳಿಸಿರುವವರು ಚಿತ್ರದುರ್ಗ ಜಿಲ್ಲೆಯಲ್ಲಿ ನೆಂಟಸ್ಥಿಕೆ ಮಾಡಿರುವವರ ಕರೆಯೆಸಿ ಗೌರವಿಸಲಾಗುತ್ತಿದೆ. ಕಾರಣಾಂತರಗಳಿಂದ ಈ ಮಾಲಿಕೆ ಸ್ಥಗಿತಗೊಂಡಿತ್ತು. ಇದೀಗ ಪುನರ್ ಚಾಲನೆ ನೀಡಲಾಗಿದೆ ಎಂದರು.