- ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ ಅಭಿಮತ । ಆರ್ಯವೈಶ್ಯ ಸೊಸೈಟಿ, ಬ್ಯಾಂಕ್ಗಳ ಸಹಕಾರಿ ಬಂಧುಗಳ ಕಾರ್ಯಾಗಾರ - - -
ರಾಜ್ಯದಲ್ಲಿ ಆರ್ಯವೈಶ್ಯ ಸಮಾಜದ ಸಹಕಾರ ಸಂಘ, ಸೊಸೈಟಿ, ಬ್ಯಾಂಕ್ಗಳು ಈವರೆಗೂ ತಮ್ಮ ಗ್ರಾಹಕರ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡು, ನಿಯತ್ತಿನಿಂದ, ನಿರ್ವಂಚನೆಯಿಂದ ನಿರಂತರ ಸೇವೆ ಮಾಡಿಕೊಂಡು ಬರುತ್ತಿವೆ. ಇದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದರು.
ನಗರದ ಚಾರ್ಟೆಡ್ ಅಕೌಂಟೆಂಟ್ ಭವನದಲ್ಲಿ ಭಾನುವಾರ ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಕೋ-ಆಪ್ ಬ್ಯಾಂಕ್ಸ್ ಅಂಡ್ ಸೊಸೈಟೀಸ್ ಫೆಡರಷನ್ನಿಂದ ಆರ್ಯವೈಶ್ಯ ಸಹಕಾರಿ ಬಂಧುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಯವೈಶ್ಯ ಸಮುದಾಯದ ಸೊಸೈಟಿಗಳು, ಬ್ಯಾಂಕ್ಗಳ ಬದ್ಧತೆ, ಇಚ್ಛಾಶಕ್ತಿಯಿಂದ ಇಂದು ಗ್ರಾಹಕರ ವಿಶ್ವಾಸ ಉಳಿಸಿಕೊಂಡಿವೆ ಎಂದರು.ಆರ್ಯವೈಶ್ಯ ಸಮುದಾಯದ ಸೊಸೈಟಿಗಳಾಗಲೀ, ಬ್ಯಾಂಕ್ಗಳಾಗಲೀ ಇಲ್ಲಿವರೆಗೂ ಜನರಿಗೆ ಮೋಸ ಮಾಡಿಲ್ಲ. ಷೇರುದಾರರಿಗೆ ಡಿವಿಡೆಂಟ್, ಬಡ್ಡಿ, ವಿವಿಧ ಸೇವೆಗಳನ್ನು ಪ್ರಾಮಾಣಿಕವಾಗಿ ನೀಡುತ್ತಿವೆ. ಈ ಮೂಲಕ ಸಂಸ್ಥೆ ಗೌರವ ಹೆಚ್ಚಿಸುವ ಕೆಲಸ ಮಾಡುತ್ತಿವೆ. ನಮ್ಮ ಮೇಲೆ ನಂಬಿಕೆ ಇಟ್ಟು ಗ್ರಾಹಕರ ವಿಶ್ವಾಸಕ್ಕೆ ತಕ್ಕಂತೆ ಮತ್ತಷ್ಟು ಜನೋಪಯೋಗಿ, ಗ್ರಾಹಕರ ಉಪಯೋಗಿಯಾಗಿ ಬಳಸುವ ಮೂಲಕ ಸಂಸ್ಥೆಯ ಜೊತೆಗೆ ಗ್ರಾಹಕರ ಏಳಿಗೆಗೂ ಶ್ರಮಿಸಬೇಕು ಎಂದು ಹೇಳಿದರು.
ಸಹಕಾರ ಕ್ಷೇತ್ರಗಳಲ್ಲಿ ಕಾರ್ಯಾಗಾರಗಳನ್ನು ನಡೆಸುವುದಕ್ಕೆ ಖುಷಿ ಸಹಜವಾಗಿರುತ್ತದೆ. ಆದರೆ, ಕಾರ್ಯಾಗಾರಕ್ಕೆ ಬರುವುದಕ್ಕೆ ಕಷ್ಟ ಎಂಬ ಭಾವನೆ ಅನೇಕರಲ್ಲಿ ಇರುವುದನ್ನು ಕಾಣುತ್ತಿದ್ದೇವೆ. ಕಲಿಕೆ ಎಂಬುದು ನಿಂತ ನೀರಲ್ಲ, ನಿರಂತರವಾದುದು. ಹೊಸತನ್ನು ಕಲಿತರೆ ನಾವೂ ಮತ್ತೊಬ್ಬರಿಗೆ ತಿಳಿಸಬಹುದು. ಸಹಕಾರ ಕ್ಷೇತ್ರವು ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ಅಂತಹ ಸಹಹಾರ ಕ್ಷೇತ್ರದ ಸಿಬ್ಬಂದಿ ತಮಗೆ ಎಲ್ಲವೂ ಗೊತ್ತು ಎಂಬ ಧೋರಣೆ ಕೈಬಿಟ್ಟು, ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಆನ್ ಲೈನ್ ಮೂಲಕ ವಂಚಿಸುವ ಪ್ರಕರಣ ಹೆಚ್ಚುತ್ತಿವೆ. ಸಹಕಾರ ಸಿಬ್ಬಂದಿ ಇಂತಹ ಕಾರ್ಯಾಗಾರದಲ್ಲಿ ಜ್ಞಾನ ಸಂಪಾದಿಸಿದರೆ ಸೈಬರ್ ಕ್ರೈಂಗಳನ್ನು ತಡೆಯಲು ಸಾಧ್ಯ. ನಾವು ಆರ್ಯವೈಶ್ಯ ಸಮಾಜಕ್ಕೆ ಮಾತ್ರವೇ ಸೀಮಿತವಾಗದೇ, ಅದನ್ನೂ ಮೀರಿ ಬೆಳೆಯಬೇಕು. ವ್ಯಾವಹಾರಿಕ ಜ್ಞಾನದ ಜೊತೆ ಸಹಕಾರ ಕ್ಷೇತ್ರದ ಕಾನೂನು, ನಿಯಮಗಳ ಬಗ್ಗೆ ಅರಿವು ಹೊಂದಿರಬೇಕು. ಆಗ ಇಂತಹ ಕಾರ್ಯಾಗಾರ ಸಹಕಾರಿಯಾಗುತ್ತವೆ. ಸಹಕಾರ ಸೊಸೈಟಿಗಳು, ಬ್ಯಾಂಕ್ಗಳು ಜನರ ಬದುಕನ್ನು ಕಟ್ಟಿಕೊಡುವುದಲ್ಲದೇ, ರಾಷ್ಟ್ರದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
- - -
ರಾಜ್ಯಾದ್ಯಂತ 67 ಸೊಸೈಟಿಗಳು, 8 ಬ್ಯಾಂಕ್ಗಳನ್ನು ಆರ್ಯವೈಶ್ಯ ಸಮಾಜದಿಂದ ನಡೆಸಲಾಗುತ್ತಿದೆ. ಇವುಗಳ ಅಭಿವೃದ್ಧಿಗೆ ಫೆಡರೇಷನ್ನಿಂದ ನಿರ್ದೇಶಕರನ್ನು ನೇಮಿಸಿದೆ. ಆದರೆ, ನಿರ್ದೇಶಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಎಲ್ಲರೂ ಕೈ ಜೋಡಿಸಿ, ಕೆಲಸ ಮಾಡುವ ಮೂಲಕ ಸಮಾಜವನ್ನು ಮತ್ತಷ್ಟು ಸದೃಢಗೊಳಿಸೋಣ. ಸಮಾಜದ ಹೆಚ್ಚಿನ ಸೊಸೈಟಿಗಳು ಬ್ಯಾಂಕ್ಗಳಾಗಿ ಪರಿವರ್ತನೆಯಾಗುವಂತೆ, ಮೇಲ್ದರ್ಜೆಗೆ ಏರುವಂತೆ ನಾವು, ನೀವೆಲ್ಲರೂ ಸೇರಿ ಶ್ರಮಿಸೋಣ ಎಂದು ಆರ್.ಜಿ.ಶ್ರೀನಿವಾಸ ಮೂರ್ತಿ ಮನವಿ ಮಾಡಿದರು.
-25ಕೆಡಿವಿಜಿ2: