ಗೋ ಪಾಲಕರಾಗಿ, ಸಾವಯವ ಕೃಷಿಗೆ ಮನಸ್ಸು ಮಾಡಿ-ಫಕೀರಸಿದ್ಧರಾಮ ಶ್ರೀ

KannadaprabhaNewsNetwork | Published : Mar 20, 2024 1:19 AM

ಸಾರಾಂಶ

ರೈತರು ಸಾಲದ ದಾಸರಾಗುವುದು ಬೇಡ ಎಂದರೆ, ಸಾವಯವ ಕೃಷಿಗೆ ಮನಸ್ಸು ಮಾಡಿ. ಗೋ ಪಾಲಕರಾಗಿ ರಾಸಾಯನಿಕ ಮುಕ್ತ ಕೃಷಿಗೆ ಮುಂದಾಗಿ. ವಿಷಮುಕ್ತ ಅನ್ನ ಆಹಾರ ನೀಡಲು ಮನಸ್ಸು ಮಾಡಿ ಎಂದು ಜಗದ್ಗುರು ಶಿರಹಟ್ಟಿಯ ಫಕೀರಸಿದ್ಧರಾಮ ಮಹಾಸ್ವಾಮಿಗಳು ಕರೆ ನೀಡಿದರು.

ಹಾನಗಲ್ಲ: ರೈತರು ಸಾಲದ ದಾಸರಾಗುವುದು ಬೇಡ ಎಂದರೆ, ಸಾವಯವ ಕೃಷಿಗೆ ಮನಸ್ಸು ಮಾಡಿ. ಗೋ ಪಾಲಕರಾಗಿ ರಾಸಾಯನಿಕ ಮುಕ್ತ ಕೃಷಿಗೆ ಮುಂದಾಗಿ. ವಿಷಮುಕ್ತ ಅನ್ನ ಆಹಾರ ನೀಡಲು ಮನಸ್ಸು ಮಾಡಿ ಎಂದು ಜಗದ್ಗುರು ಶಿರಹಟ್ಟಿಯ ಫಕೀರಸಿದ್ಧರಾಮ ಮಹಾಸ್ವಾಮಿಗಳು ಕರೆ ನೀಡಿದರು.

ಹಾನಗಲ್ಲ ತಾಲೂಕಿನ ಸಾಂವಸಗಿಯ ಶ್ರೀ ವೀರಭದ್ರೇಶ್ವರ ರಥೋತ್ಸವದ ಧರ್ಮ ಸಭೆಯ ಸಾನಿಧ್ಯ ವಹಿಸಿ, ವಾಸುದೇವಮೂರ್ತಿ ಮೂಡಿ ಅವರಿಗೆ ವೀರ ಕೃಷಿಕ ಪ್ರಶಸ್ತಿ ನೀಡಿ, ಸುಮಮಗಲಾ ದೊಡ್ಡಮನಿ ಹಾಗೂ ರುದ್ರಪ್ಪ ಕೂಡಲ ಅವರ ತುಲಾಭಾರ ಭಕ್ತಿ ಸೇವೆ ಸ್ವೀಕರಿಸಿ ಮಾತನಾಡಿದರು.

ಶಕ್ತಿ ಇರುವಾಗ ಭಕ್ತಿ ಮೆರೆಯಬೇಕು. ನಮ್ಮ ಮಾತು ಮನಸ್ಸು ಚೆನ್ನಾಗಿರಲಿ. ಅಂತಹಕರಣ ಶುದ್ಧವಾದ ನಡೆ ಇರಲಿ. ಒಳ್ಳೆಯದನ್ನು ಮಾಡಲಾಗದಿದ್ದರೂ ಒಳ್ಳೆಯದನ್ನು ನೋಡಿ ಮನಸ್ಸನ್ನು ಸಂತಸಗೊಳಿಸಿಕೊಳ್ಳಿ. ಈಗ ಸಾಂಪ್ರದಾಯಿಕ ಜೀವನದಿಂದ ಮನುಷ್ಯ ದೂರವಾಗುತ್ತಿರುವುದು ವಿಷಾದದ ಸಂಗತಿ. ತುಲಾಭಾರ ಎಂಬ ಭಕ್ತರ ಸೇವೆಯಲ್ಲಿ ಸಂಕಲ್ಪ ಸಿದ್ಧಿ ಇದೆ. ನಿಸರ್ಗವನ್ನು ಪ್ರೀತಿಸಿ ಗೌರವಿಸಿ. ಮನುಷ್ಯ ಈ ಭೂಮಿಯನ್ನು ಬಿಡುವಾಗ ಪುಣ್ಯದ ಗಂಟು ಕಟ್ಟಿಕೊಂಡು ಹೋಗಬೇಕು. ಅದೇ ನಿಜವಾದ ಜೀವನದ ಸಾರ್ಥಕತೆ ಎಂದರು.

ಕೂಡಲದ ಗುರುಮಹೇಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಯ ಯಾರಿಗೂ ಕಾಯುವುದಿಲ್ಲ. ಧರ್ಮ ರಕ್ಷಣೆಯ ಕಾಲದಲ್ಲಿ ನಾವಿದ್ದೇವೆ. ಗುರು ಹಿರಿಯರನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ಹಮ್ಮು-ಬಿಮ್ಮುಗಳನ್ನು ಬಿಟ್ಟು, ಮದ ಮತ್ಸರದಿಂದ ದೂರವಾಗಿ, ಅಹಂಕಾರವನ್ನು ಅಳಿಸಿ ಬದುಕನ್ನು ಹಸನು ಮಾಡಿಕೊಳ್ಳಿ ಎಂದರು.

ಸಾವಯವ ಕೃಷಿ ಸಾಧಕ ಸಾಂವಸಗಿಯ ಶ್ರೀ ವೀರಭದ್ರೇಶ್ವರ ಟ್ರಸ್ಚ್‌ ಸಮಿತಿಯ ವೀರ ಕೃಷಿಕ ಪ್ರಶಸ್ತಿ ಪುರಸ್ಕೃತ ರೈತ ವಾಸುದೇವಮೂರ್ತಿ ಮೂಡಿ ಮಾತನಾಡಿ, ರೈತನ ತ್ಯಾಗದಿಂದಾಗಿ ಇಡೀ ಜಗತ್ತಿಗೆ ಅನ್ನ ಆಹಾರ ಸಿಗುತ್ತಿದೆ ಎಂಬ ಸತ್ಯವನ್ನು ನಿತ್ಯ ನೆನೆಯಬೇಕು. ಈಗ ರೈತ ಲೆಕ್ಕ ಹಾಕಿ ಕೃಷಿ ಕೈಗೊಳ್ಳಬೇಕು. ಭೂಮಿಯನ್ನು ಅರ್ಥ ಮಾಡಿಕೊಳ್ಳಬೇಕು. ರೈತನೂ ಆರ್ಥಿಕ ಸಬಲತೆ ಹೋಂದಬೇಕು. ಈಗಿನ ಆಹಾರ ಪದ್ಧತಿ ವಿಷಯುಕ್ತವಾಗಿದೆ. ಸಾವಯವ ಕೃಷಿಗೆ ದೊಡ್ಡ ಬೆಲೆ ಬರಲಿದೆ. ಅಂಧರಂತೆ ಆಹಾರವನ್ನು ಸ್ವೀಕರಿಸದಿರಿ. ನಾವು ಬಳಸುವ ಆಹಾರದಲ್ಲಿ ಇರುವ ವಿಷಯುಕ್ತತೆಯ ಪರೀಕ್ಷೆ ಬೇಕಾಗಿದೆ. ಆ ಕಾಣಕ್ಕಾಗಿಯೇ ಈಗ ರೋಗ ರುಜಿನಗಳು ಹೆಚ್ಚಾಗುತ್ತಿವೆ ಎಂದು ಎಚ್ಚರಿಸಿದರು.

ಹೀರೂರಿನ ನಂಜುಂಡ ಪಂಡಿತಾರಾಧ್ಯ ಶ್ರೀಗಳು ಸಮ್ಮುಖ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಸಂಗಯ್ಯಶಾಸ್ತ್ರೀ ಹಿರೇಮಠ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಅಗಸನಹಳ್ಳಿ, ಗ್ರಾಪಂ ಅಧ್ಯಕ್ಷೆ ರೇಣುಕಾ ಅಜಗುಂಡಿ, ಹಾನಗಲ್ಲ ಪುರಸಭೆ ಸದಸ್ಯೆ ಶೋಭಾ ಉಗ್ರಣ್ಣನವರ, ಸಿ.ವಿ. ಮತ್ತಿಕಟ್ಟಿ, ಶ್ರೀ ವಿರಭದ್ರೇಶ್ವರ ಟ್ರಸ್ಟ್‌ ಸದಸ್ಯರಾದ ವೀರಭದ್ರೇಶ್ವರ ಟ್ರಸ್ಟ ಸಮಿತಿಯ ಸದಸ್ಯರಾದ ಮಲ್ಲಪ್ಪ ಬೆಣ್ಣಿ, ನಾರಾಯಣ ಬಡಿಗೇರ, ಟಾಕನಗೌಡ ಪಾಟೀಲ, ಈಶ್ವರ ಕುಲಕರ್ಣಿ, ಶಾಂತಪ್ಪ ದೊಡ್ಡಮನಿ, ಶಿವಾನಂದಪ್ಪ ಹಳ್ಳಿಗುಡಿ, ಇರಸಂಗಪ್ಪ ಗುರಣ್ಣನವರ, ಯಲ್ಲಪ್ಪ ಚಂದ್ರಗೇರಿ, ಸುಭಾಸ ಮೂಡುರು, ಪ್ರಕಾಶ ಈಳಿಗೇರ, ಶಿವಪ್ಪ ಈಳಿಗೇರ, ಲಕ್ಷಪ್ಪ ಓಲೇಕಾರ, ಬಸಪ್ಪ ವಾಲಗದ ಈ ಸಂದರ್ಭದಲ್ಲಿದ್ದರು.

ವನಿತಾ ಕುಂಟನಹೊಸಳ್ಳಿ ಪ್ರಾರ್ಥನೆ ಹಾಡಿದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು. ವೀರಣ್ಣ ದೊಡ್ಡಮನಿ ನಿರೂಪಿಸಿದರು.

Share this article