ನಮ್ಮ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ನಾವೆಲ್ಲರೂ ದೇಶಕ್ಕೆ ಮತ್ತು ಸಮಾಜಕ್ಕೆ ಹೆಗಲು ಕೊಡುವ ವ್ಯಕ್ತಿಗಳಾಗಬೇಕಾಗಿದೆ. ವಿದ್ಯಾರ್ಥಿಗಳು ಸಾರ್ಥಕ ಶ್ರಮದ ಮೂಲಕ ಜೀವನ ಸಾರ್ಥಕತೆ ಗಳಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ಕುಮಟಾ: ನಮ್ಮ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ನಾವೆಲ್ಲರೂ ದೇಶಕ್ಕೆ ಮತ್ತು ಸಮಾಜಕ್ಕೆ ಹೆಗಲು ಕೊಡುವ ವ್ಯಕ್ತಿಗಳಾಗಬೇಕಾಗಿದೆ. ವಿದ್ಯಾರ್ಥಿಗಳು ಸಾರ್ಥಕ ಶ್ರಮದ ಮೂಲಕ ಜೀವನ ಸಾರ್ಥಕತೆ ಗಳಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಪ್ರಗತಿ ಪಥ-೨೦೨೫ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ನಾವು ನಿಯಮವನ್ನು ಪಾಲಿಸಬೇಕಾಗಿರುವುದು ಯಾರ ಭಯ ಅಥವಾ ಒತ್ತಡಕ್ಕಾಗಿ ಅಲ್ಲ, ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಗೌರವ ಇದ್ದರೆ ಸಾಕು ಹೆದರಿಕೆ ಬೇಡ. ಸಮಾಜದಲ್ಲಿ ಡೆಲಿಜನ್, ಸಿಟಿಜನ್ ಮತ್ತು ಸನ್ಸ್ ಏಂಡ್ ಡಾಟರ್ಸ್ ಆಫ್ ದ ಸಾಯಿಲ್ ಎಂಬ ಮೂರು ವರ್ಗವಿರುತ್ತದೆ. ಡೆಲಿಜನ್ಗಳಿಗೆ ನಾಳೆ ಮತ್ತು ಮುಂದಿನ ಯೋಚನೆ ಇರುವುದಿಲ್ಲ. ಸಿಟಿಜನ್ಗಳಿಗೆ ನಾಳೆ ಮತ್ತು ಮುಂದಿನ ದಿನಗಳ ಚಿಂತೆ ಮಾತ್ರ ಇರುತ್ತದೆ. ಸನ್ಸ್ ಏಂಡ್ ಡಾಟರ್ಸ್ ಆಫ್ ದ ಸಾಯಿಲ್ ವರ್ಗವನ್ನು ಇಂದು ನಾವು ಹೆಚ್ಚಾಗಿ ಓದುತ್ತಿದ್ದೇವೆ ಎಂದರು.೮೫೦೦ ವರ್ಷಗಳ ಜಗತ್ತಿನ ಅತ್ಯಂತ ಜೀವಂತ ಪ್ರಾಚೀನ ನಗರ ವಾರಣಾಸಿ ಅಥವಾ ಕಾಶಿ. ಜಗತ್ತಿನಲ್ಲಿ ಬಹಳ ಪ್ರಾಚೀನ ಕಾಲದಲ್ಲಿ ಇದ್ದ ಎಷ್ಟೋ ದೇಶಗಳು ಈಗ ಇಲ್ಲ. ದೇಶ ಇದ್ದರೂ ಪ್ರಾಚೀನತೆಯೊಂದಿಗೆ ಕೊಂಡಿ ಕಳೆದುಕೊಂಡಿದೆ. ಆದರೆ ನಮ್ಮ ದೇಶದ ಪ್ರಾಚೀನತೆಯ ಹೆಗ್ಗುರುತುಗಳು ಇಂದಿಗೂ ಜೀವಂತವಾಗಿ ಚಾಲ್ತಿಯಲ್ಲಿರುವುದು ಈ ನೆಲದ ವಿಶೇಷ. ಶ್ರೀರಾಮ ಎಂದೂ ನಡವಳಿಕೆಯ ಗಡಿಗಳನ್ನು ದಾಟಿಲ್ಲ. ಆದ್ದರಿಂದಲೇ ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗೋರೆಯಂತಹ ಕುಗ್ರಾಮದಲ್ಲಿ ವಸತಿ ಸಹಿತ ಕಾಲೇಜು ಕಟ್ಟಿಸಿ ಡಾ.ಜಿ.ಜಿ.ಹೆಗಡೆ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರೆ ತಪ್ಪಾಗಲಾರದು. ಈ ಕಾಲೇಜಿನಲ್ಲಿ ಸಂಸ್ಕಾರಯುತವಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿರುವ ಬಗ್ಗೆ ಧನ್ಯವಾದ ಹೇಳುತ್ತೇನೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಉನ್ನತ ಕಲಿಕೆ ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವಂತೆ ಹೆಚ್ಚಿನ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಸಹಕರಿಸುವಂತೆ ಬಿ.ಎಲ್.ಸಂತೋಷ ಅವರಲ್ಲಿ ವಿನಂತಿಸಿದರು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ.ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಉನ್ನತ ಧ್ಯೇಯದೊಂದಿಗೆ ಹಮ್ಮಿಕೊಂಡ ವಸತಿ ಸಹಿತ ಪಿಯು ಕಾಲೇಜಿನ ಪರಿಕಲ್ಪನೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಸಂತಸ ಹಾಗೂ ಸಾರ್ಥಕ ಭಾವನೆ ತಂದಿದೆ ಎಂದರು.ಶಿವಮೊಗ್ಗ ವಿಭಾಗ ಪ್ರಮುಖ ಗಿರೀಶ ಪಾಟೀಲ, ವಿಶ್ವಸ್ಥರಾದ ಡಾ. ಸೀತಾಲಕ್ಷ್ಮೀ ಹೆಗಡೆ, ಡಿ.ಎನ್.ಭಟ್, ಸಲಿಲಾ ಭಟ್ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ನಾಗರಾಜ ಹೆಗಡೆ ಸ್ವಾಗತಿಸಿದರು. ಪೂಜಾ ಭಟ್ ನಿರೂಪಿಸಿದರು. ರಮ್ಯಾ ಸಭಾಹಿತ ವಂದಿಸಿದರು.