ಹಾಸನ ನಗರದ ಬಿ.ಎಮ್. ಬೈಪಾಸ್ ರಸ್ತೆಯಲ್ಲಿರುವ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ದ್ರವ್ಯಗುಣ ವಿಭಾಗ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಭೂಮಿ ಉಳಿಸಿ ಆಂದೋಲನ, ಇವರ ಸಹಯೋಗದಲ್ಲಿ ಗಿಡನೆಡುವುದರ ಮೂಲಕ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚ. ನಾ. ಅಶೋಕ್, ರಾಜ್ಯಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಎಂಡೋಸಲ್ಫನ್ ನಂತಹ ವಿಷಕಾರಿ ಅಂಶಗಳನ್ನು ಬಳಸುವುದರಿಂದ ಕ್ಯಾನ್ಸರ್, ಅಂಗವೈಕಲ್ಯದಂತ ಮಾರಕ ಕಾಯಿಲೆಗೆ ತುತ್ತಾಗುವುದರೊಂದಿಗೆ ಪ್ರಕೃತಿಯ ವಿನಾಶಕ್ಕೆ ಕಾರಣವಾಗಬಹುದು. ಕ್ಯುಬಾ ದೇಶದಲ್ಲಿ ಪರಿಸರ ಸ್ನೇಹಿ ವ್ಯವಸಾಯ ಮಾಡುವುದರಿಂದ ಪ್ರಕೃತಿಯ ವಿಕೋಪವಾಗುದನ್ನು ತಡೆಯುತ್ತಾರೆ. ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಸ್ವಂತ ವಾಹನ ಬಳಸುವುದರಿಂದ ಅತಿಯಾದ ಕಾರ್ಬನ್ ಮೋನೋಕ್ಸೈಡ್ ಹೊರಸೂಸಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವುದಲ್ಲದೆ ಪ್ರಕೃತಿಯ ತಾಪಮಾನವೂ ಹೆಚ್ಚಳವಾಗುವಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದರು.
ನಾವು ಪ್ರಾಣ ವಾಯುವನ್ನು ಕೊಡುವ ಗಿಡಮರಗಳನ್ನು ಬೆಳೆಸುವುದರಿಂದ ಮಾನವರಿಗೆ ಮಾತ್ರವಲ್ಲದೆ ಪ್ರತಿಯೊಂದು ಜೀವ ಸಂಕುಲಕ್ಕೆ ಆಧಾರವಾಗುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ನಿಸರ್ಗವನ್ನು ಹಸ್ತಾಂತರಿಸಬೇಕೆಂದು ಪ್ರತಿಜ್ಞೆ ಮಾಡೋಣ ಎಂದರು.ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಎನ್.ಡಿ.ಆರ್.ಕೆ ಪ್ರಥಮ ದರ್ಜೆಕಾಲೇಜು ಹಾಸನದ ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಮಾನಸ ಎಸ್. ಆರ್ ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದ ಪರಿಸರ ಹಾಗೂ ಜೀವ ಸಂಕುಲಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.೧೧ ಮಿಲಿಯನ್ ಟನ್ಗಳಷ್ಟು ಮೈಕ್ರೋಪ್ಲಾಸ್ಟಿಕ್ನ (ಸೂಕ್ಷ್ಮಪ್ಲಾಸ್ಟಿಕ್) ಅಂಶ ನೀರಿನಲ್ಲಿ ಪತ್ತೆಯಾಗಿದೆ ಎಂದರು. ೨೦೦೦ ಟ್ರಕ್ ಪ್ಲಾಸ್ಟಿಕ್ನ್ನು ದಿನ ನಿತ್ಯ ಸಮುದ್ರಕ್ಕೆ ಎಸೆಯುತ್ತಾರೆಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಸ್.ಎ.ನಿತಿನ್, ಬೆಂಗಳೂರು ನಗರವು ಸಂಪೂರ್ಣ ಕಟ್ಟಡಗಳಿಂದ ತುಂಬಿರುವುದರಿಂದ ಅಲ್ಲಿನ ಉದ್ಯೋಗಸ್ಥರು ವಾರಾಂತ್ಯದಲ್ಲಿ ಪ್ರಕೃತಿ ವೀಕ್ಷಣೆಗೆ ಹಾಗೂ ಒತ್ತಡ ನಿವಾರಣೆಗೆ ಚಿಕ್ಕಮಗಳೂರು ಹಾಗೂ ಸಕಲೇಶಪುರದತ್ತ ಚಿತ್ತೈಸುತ್ತಿದ್ದಾರೆಂದರು.ನಾವು ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಬೆಳೆಸುವುದರಿಂದ ಹಾಗೂ ಮಳೆ ನೀರನ್ನು ಇಂಗಿಸಲು ಇಂಗು ಗುಂಡಿಗಳನ್ನು ಮಾಡುವುದರಿಂದ ಅಂತರ್ಜಲ ಮಟ್ಟವನ್ನು ಕಾಯ್ದಿರಿಸಿಕೊಳ್ಳಬಹುದೆಂದರು.
ಹಾಸನ ನಗರದ ಆರು ಪ್ರಮುಖ ಪಾರ್ಕ್ಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನೂ ಮಾಡಲಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಪಾರ್ಕ್ಗಳಲ್ಲಿ ಔಷಧ ಗಿಡಗಳನ್ನು ನೆಡುವ ಹಾಗೂ ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ತಿಳಿಸಿ ಪರಿಸರ ಉಳಿಸುವುದರ ಜೊತೆಗೆ ಪ್ರಕೃತಿಗೆ ಸನಿಹದಲ್ಲಿರುವ ಆಯುರ್ವೇದವನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಮಾಡೋಣ ಎಂದರು.