ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನವೂ ಸೇರಿಸಿ, ಕನಿಷ್ಠ 10 ಸಾವಿರ ರು. ಗೌರವಧನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯು ಎಐಟಿಯುಸಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಆಶಾ ಕಾರ್ಯಕರ್ತೆಯರು ಬುಧವಾರ ಪ್ರತಿಭಟಿಸಿದರು.
ನಗರದ ಶ್ರೀ ಜಯದೇವ ವೃತ್ತದಲ್ಲಿ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅಲ್ಲಿಯೇ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮನವಿ ಅರ್ಪಿಸಿ, ಮಳೆಯಲ್ಲೂ ಘೋಷಣೆ ಕೂಗುತ್ತ ಸಚಿವರ ನಿವಾಸ ಶಿವ ಪಾರ್ವತಿಗೆ ತೆರಳಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ಕುಕ್ಕವಾಡ ಮಂಜುನಾಥ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ಪ್ರೋತ್ಸಾಹಧನ ಸೇ
ರಿಸಿ ಕನಿಷ್ಠ 10 ಸಾವಿರ ರು. ಗೌರವಧನವನ್ನು 2025ರ ಏಪ್ರಿಲ್ನಿಂದಲೇ ಅನ್ವಯವಾಗುವಂತೆ ನೀಡಬೇಕು. ಪ್ರಸಕ್ತ ಬಜೆಟ್ ನಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದಂತೆ 1 ಸಾವಿರ ರು.ಹೆಚ್ಚಳದ ಆದೇಶ ನೀಡಬೇಕು. ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಜನವರಿ ತಿಂಗಳಲ್ಲಿ ನಡೆಸಿದ ಹೋರಾಟದ ವೇಳೆ ಸಂಘಟನೆ ಮುಖಂಡರ ಸಭೆ ನಡೆಸಿ, ನಮಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದರು.42000 ಆಶಾಗಳಲ್ಲಿ ಈಗಾಗಲೇ ಸುಮಾರು 27 ಸಾವಿರ ಆಶಾಗಳಿಗೆ ತಂಡ ಆದಾರಿತ 1 ಸಾವಿರ ರು. ಪ್ರೋತ್ಸಾಹಧನ ನೀಡುತ್ತಿದ್ದು, ಕಳೆದ 2 ವರ್ಷದಿಂದ ಹೇಳಿದ ಇನ್ನುಳಿದ 15004 ಆಶಾಗಳಿಗೆ ಕಡಿಮೆ ಇದ್ದ ತಂಡ ಆದಾರಿತ 1 ಸಾವಿರ ರು.ನಂತೆ ಮಾತ್ರ ಪ್ರೋತ್ಸಾಹಧನವನ್ನು ಬಜೆಟ್ನಲ್ಲಿ ನೀಡಲಾಗಿದೆ ಎಂದರು.
ನಗರ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ, ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಟ 2 ಸಾವಿರ ರು. ಗೌರವಧನ ಹೆಚ್ಚಿಸಬೇಕು. ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ 5 ಲಕ್ಷ ರು. ನೀಡಬೇಕು. ಈ ಬೇಡಿಕೆಗಳ ಬಗ್ಗೆ ಜನವರಿ ತಿಂಗಳ ಹೋರಾಟದ ವೇಳೆ ಆರೋಗ್ಯ ಇಲಾಖೆ ಆಯುಕ್ತರು ಮುಖ್ಯಮಂತ್ರಿಗಳ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದು, ಭರವಸೆ ನೀಡಿದ್ದರು. ಈ ಬಗ್ಗೆ ಸಿಎಂ ಮಾಧ್ಯಮಗಳಲ್ಲೂ ಘೋಷಣೆ ಮಾಡಿದ್ದು, ಸಚಿವರು, ಶಾಸಕರೂ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಹೇಳಿಕೊಂಡಿದ್ದಾರೆ. ಆದರೆ, 6 ತಿಂಗಳಾದರೂ ಈ ಬಗ್ಗೆ ಸ್ಪಷ್ಟ ಆದೇಶ ಹೊರ ಬಿದ್ದಿಲ್ಲ ಎಂದು ದೂರಿದರು.ಎಐಟಿಯುಸಿ ಜಿಲ್ಲಾ ಖಜಾಂಚಿ ತಿಪ್ಪೇಸ್ವಾಮಿ ಅಣಬೇರು. ಆಶಾ ಸಂಘಟನೆ ಮುಖಂಡರಾದ ಮಧು ತೊಗಲೇರಿ, ಜಿಲ್ಲಾಧ್ಯಕ್ಷೆ ಲಲಿತಮ್ಮ ನರಗನಹಳ್ಳಿ, ಕಾರ್ಯದರ್ಶಿ ಹಿರೇಮಳಲಿ ನಾಗವೇಣಿ, ಮುಖಂಡರಾದ ಹಾಲಮ್ಮ, ತಿಪ್ಪಮ್ಮ ನೀರ್ಥಡಿ, ಎಸ್.ಆರ್.ಇಂದಿರಾ, ರೀತಾ, ಹಳದಮ್ಮ, ರೂಪಾ, ಮುಂಜುಳಾ ಕೊಂಡದಹಳ್ಳಿ, ಲಕ್ಷ್ಮೀದೇವಿ, ಮಂಜಮ್ಮ ಚೀಲೂರು, ಲೀಲಾವತಿ, ಫರ್ವೀನ್ ಬಾನು ಮುಂತಾದವರು ಇದ್ದರು.